ಬೆಳಗಾವಿ: ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್ ಸಾವಿನ ಬಗ್ಗೆ ಪುತ್ರಿ ಸಂದ್ಯಾ ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದು, ತಂದೆಯ ಸಾವು ಅಸ್ವಾಭಾವಿಕ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ತಂದೆಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಸಂದ್ಯಾ ಪಾಟೀಲ್ ಎಪಿಎಂಸಿ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕೆಎಲ್ಇ ವೈದ್ಯರಿಂದ ಸಂಭಾಜಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕೆಎಲ್ಇ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿನ್ನೆ ರಾತ್ರಿ ಸಂಭಾಜಿ ಪಾಟೀಲ್ ಮೃತಪಟ್ಟಿದ್ದರು, ಆದರೆ ತಡರಾತ್ರಿ ಆಸ್ಪತ್ರೆಗೆ ಬಂದ ಪುತ್ರಿ ಶವ ಕೊಂಡ್ಯೊಯಲು ಬಿಡದೆ ಮರಣೋತ್ತರ ಪರೀಕ್ಷೆಗೆ ಪಟ್ಟು ಹಿಡಿದರು. ಪರಿಣಾಮ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಿದರು.
ಇಂದು ಸಂಜೆ ಶಹಾಪುರದ ಸ್ಮಶಾನದಲ್ಲಿ ಸಂಭಾಜಿ ಪಾಟೀಲ್ ಅವರ ಅಂತ್ಯಸಂಸ್ಕಾರ ನೆರವೇರಿತು. ಈ ವೇಳೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಸಂಭಾಜಿ ಪಾಟೀಲ್ ಅಂತಿಮ ದರ್ಶನ ಪಡೆದರು. ಸರ್ಕಾರಿ ಗೌರವದೊಂದಿಗೆ ಸಂಭಾಜಿ ಪಾಟೀಲ್ ಅವರ ಅಂತ್ಯಸಂಸ್ಕಾರ ನಡೆಯಿತು. ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಸುರೇಶ್ ಅಂಗಡಿ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.