ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್ಗೆ ಅಭಿಮಾನಿಗಳು ಫಿದಾ
ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.
ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ. ಈತನ ಮಾತಿಗೆ ಪೊಲೀಸ್ ಇಲಾಖೆ ಯಾವ ರೀತಿಯಲ್ಲಿ ಕ್ರಮ ತಗೆದುಕೊಳ್ಳತ್ತೋ ಕಾದು ನೋಡಬೇಕಿದೆ.