ಹಾವೇರಿ: ಕಾಂಗ್ರೆಸ್ (Congress) ಪಾರದರ್ಶಕ ಪಕ್ಷವಾಗಿದ್ದು, ನಾವು ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ (Salim Ahmed) ತಿಳಿಸಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ನಾವು ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ, ಪಕ್ಷದ ಕಟ್ಟಡಕ್ಕಾಗಿ ಆಕಾಂಕ್ಷಿಗಳಿಂದ ಹಣ ಸಂಗ್ರಹ ಮಾಡುತ್ತಿದ್ದೇವೆ. ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸುವಾಗ ಅವರಿಂದ ಒಂದು ಲಕ್ಷ, ಎರಡು ಲಕ್ಷ ರೂ. ಹಣ ಸಂಗ್ರಹ ಮಾಡುತ್ತಿದ್ದೇವೆ ಎಂದ ಅವರು ರಾಜ್ಯದಲ್ಲಿ ಈಗಾಗಲೇ ಒಂದು ಸಾವಿರ ಜನರು ಸರ್ವೇ ಮಾಡುತ್ತಿದ್ದಾರೆ. ಸಾಕಷ್ಟು ಜನರು ಆಕಾಂಕ್ಷಿಗಳಿದ್ದಾರೆ. ಪಕ್ಷದ ಆಂತರಿಕ ಸರ್ವೇ ಮುಗಿದ ಬಳಿಕ 150 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನ ಘೋಷಣೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ತನಿಖೆ ಮಾಡಿಸಿ. ನಾವು ತನಿಖೆ ಮಾಡಬಾರದು ಅಂತಾ ಹೇಳಿಲ್ಲ. ಸಿಬಿಐ ತನಿಖೆ ಮಾಡಿಸಿ ನಮಗೇನೂ ಹೆದರಿಕೆ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ. ಬಿಜೆಪಿ ಸರ್ಕಾರದ ಪರ್ಸಂಟೇಜ್ ಕಮಿಷನ್ ಬಗ್ಗೆ ಇಡೀ ದೇಶದ ಜನರು ಮಾತನಾಡ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬಿಜೆಪಿಯವರು ನನ್ನನ್ನು ಕ್ರಿಮಿನಲ್ ಮಾಡಿದ್ದಾರೆ: ಡಿಕೆಶಿ
ಗುತ್ತಿಗೆದಾರರ ಸಂಘದವರು ಪರ್ಸಂಟೇಜ್ ಬಗ್ಗೆ ಪತ್ರ ಬರೆದ್ರೂ ಪ್ರಧಾನಿಯವರಿಂದ ಒಂದೇ ಒಂದು ಉತ್ತರವಿಲ್ಲ. ಹಾಗಾದ್ರೆ ಪ್ರಧಾನಿಯವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾರಿಗೂ ಹೆದರುವುದಿಲ್ಲ. ನಮ್ಮ ಹೋರಾಟ ಇರೋದು ಬಿಜೆಪಿಯ ಭ್ರಷ್ಟ ಸರ್ಕಾರದ ವಿರುದ್ಧವಾಗಿದೆ. ಅಷ್ಟೇ ಅಲ್ಲದೇ ಜೆಡಿಎಸ್ನ ಕೆಲವು ನಾಯಕರು ನಮ್ಮ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿ ಪರೋಕ್ಷವಾಗಿ ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾರೆ. ಯಾವ್ಯಾವ ಬಿಜೆಪಿ(BJP), ಜೆಡಿಎಸ್ (JDS) ಮುಖಂಡರು ಕಾಂಗ್ರೆಸ್ಗೆ ಬರ್ತಾರೆ ಅನ್ನೋದನ್ನು ಕೆಲವು ದಿನಗಳ ಕಾಲ ಕಾದು ನೋಡಿ ಎಂದರು. ಇದನ್ನೂ ಓದಿ: ಮಂಗಳೂರು ಸೆಂಟ್ರಲ್ ಮಾರ್ಕೆಟ್ನ ನೀಲನಕ್ಷೆಯಲ್ಲಿ ಬೀಫ್ ಸ್ಟಾಲ್ – ಬಿಜೆಪಿ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ