ಉಡುಪಿ: ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದುಕೊಂಡು ಬರುತ್ತಿರುವ ಸಲಾಂ ಮಂಗಳಾರತಿಯ ಹೆಸರನ್ನು ಬದಲಾಯಿಸಬೇಕು. ಟಿಪ್ಪುಸುಲ್ತಾನ್ ಹೆಸರಿನಲ್ಲಿ ಆರತಿ ನಡೆಯಬಾರದು ಎಂದು ವಿಶ್ವಹಿಂದೂ ಪರಿಷತ್ತು ಸರ್ಕಾರಕ್ಕೆ ಮನವಿ ಮಾಡಿದೆ. ನಿಜ ಅರ್ಥದಲ್ಲಿ ಸಲಾಂ ಮಂಗಳಾರತಿ ಎಂದರೇನು ಪ್ರದೋಷ ಪೂಜೆ ಎಂದರೇನು ಎಂದು ಕೊಲ್ಲೂರಿನ ಹಿರಿಯ ಅರ್ಚಕ ಕೆ.ವಿ ಶ್ರೀಧರ್ ಅಡಿಗ ಮಾಹಿತಿ ನೀಡಿದ್ದಾರೆ.
ಕೊಲ್ಲೂರು ದೇಗುಲದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರದೋಷ, ಎರಡು ರಾತ್ರಿ ಕಾಲದಲ್ಲಿ ಪೂಜೆ ನಡೆಯುತ್ತದೆ. ಇದೊಂದು ಬಹಳ ಅರ್ಥಗರ್ಭಿತವಾದ ಪೂಜೆ. ಪ್ರದೋಷ ಕಾಲ ಎಂಬುದಕ್ಕೆ ಬಹಳ ಮಹತ್ವವಿದೆ. ಪ್ರದೋಷ ಕಾಲದಲ್ಲಿ ಎಲ್ಲಾ ದೇವಿ ದೇವತೆಗಳ ಸಾನಿಧ್ಯ ಇರುತ್ತದೆ ಎಂಬ ನಂಬಿಕೆಯಿದೆ. ಪ್ರದೋಷ ಕಾಲದಲ್ಲಿ ನಡೆಯುವ ಪೂಜೆಗಳ ವೈಶಿಷ್ಟ ಬೇರೆಯೇ ಇದೆ. ಇದನ್ನು ಓದಿ : ಕೆಲವು ಶಾಲೆಯಲ್ಲಿ ಹಿಜಬ್ ಯೂನಿಫಾರ್ಮ್ ಇದೆ, ಪರೀಕ್ಷೆಯಲ್ಲಿ ಹೇಗೆ ಮಾನಿಟರ್ ಮಾಡ್ತೀರಾ?: ದಿನೇಶ್ ಗುಂಡೂರಾವ್
ನಾವು ಆ ಕಾಲದಲ್ಲಿ ದೇವಿಗೆ ಪೂಜೆಯನ್ನು ನಡೆಸುತ್ತೇವೆ. ವೈಭವೋಪೇತವಾಗಿ ರಾಗೋಪಚಾರ ದೀಪಾರಾಧನೆಗಳನ್ನು ನಡೆಸುತ್ತೇವೆ. ಕರುಣಾ ಕರುಣಿಕೆಯಲ್ಲಿ ಕೇಳಿಬಂದ ಪ್ರಕಾರ ಅಂದರೆ ವಾಡಿಕೆ ಪ್ರಕಾರ ದೊರೆ ಟಿಪ್ಪು ಪೂಜೆಯಲ್ಲಿ ಭಾಗವಹಿಸಿದ್ದ. ಪ್ರದೋಷ ಪೂಜೆ ಸಂದರ್ಭದಲ್ಲಿ ಸಲಾಮ್ ಮಾಡಿದ್ದ ಅಂತ ಕರುಣಾಕರುಣಿಕ ಅರ್ಥಾತ್ ವಾಡಿಕೆಯಾಗಿ ಬಂದಿದೆ. ಇದಕ್ಕೆ ಯಾವುದೇ ತರಹದ ದಾಖಲೆಗಳು ಇಲ್ಲ. ಇದೊಂದು ಹೇಳಿಕೊಂಡು ಬಂದಿರುವಂತಹ ಮಾತು. ಪ್ರದೋಷ ಪೂಜೆ ಪ್ರದೋಷ ಮಂಗಳಾರತಿ ಎಂದೇ ದಾಖಲೆಯಲ್ಲಿರುವ ಧಾರ್ಮಿಕ ಪ್ರಾಧಾನ್ಯತೆ ಪೂಜೆಗೆ ಇದೆ.
ಇದು ಹಿಂದಿನಿಂದಲೂ ಇವತ್ತಿಗೂ ನಡೆದುಕೊಂಡು ಬಂದಿರುವಂತಹ ಆಚರಣೆ. ರಾಷ್ಟ್ರದ ಯೋಗಕ್ಷೇಮಕ್ಕೋಸ್ಕರ ಪೂಜೆ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತದೆ. ಪೂಜೆ ಸಂದರ್ಭ ಟಿಪ್ಪು ಭಾಗವಹಿಸಿದ್ದ ಎಂದು ಹೇಳಿಕೊಂಡು ಬಂದಿದ್ದಾರೆ. ಹಾಗಾಗಿ ಈ ಹೆಸರು ಬಂದಿರಬಹುದು ಎಂದು ತಿಳಿಸಿದ್ದಾರೆ. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ