ಇದೇ ಜುಲೈ 15 ರಂದು ದೇಶಾದ್ಯಂತ ಸಾಯಿ ಪಲ್ಲವಿ ನಟನೆಯ ಗಾರ್ಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿಂದೆ ಸಾಯಿ ಪಲ್ಲವಿ ನೀಡಿದ ಹೇಳಿಕೆಯಿಂದಾಗಿ ಚಿತ್ರಕ್ಕೆ ಧರ್ಮ ಸಂಕಟ ಎದುರಾಗಿದೆ. ಕಾಶ್ಮೀರ ಪಂಡಿತರ ಹತ್ಯೆಯನ್ನು ಗೋವು ಹತ್ಯೆ ಮಾಡುವವರಿಗೆ ಹೋಲಿಸಿ ಹೇಳಲಾದ ಹೇಳಿಕೆಯನ್ನು ಮುಂದಿಟ್ಟುಕೊಂಡು ಗಾರ್ಗಿ ಸಿನಿಮಾವನ್ನು ಬೈಕಾಟ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ.
ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಕನ್ನಡದಲ್ಲಿ ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅರ್ಪಿಸುತ್ತಿದ್ದಾರೆ. ಅಲ್ಲದೇ, ಈ ಸಿನಿಮಾವನ್ನು ಕನ್ನಡದಲ್ಲಿ ತಾವು ಏಕೆ ಬಿಡುಗಡೆ ಮಾಡುತ್ತಿದ್ದೇವೆ ಎನ್ನುವ ಕುರಿತಾಗಿಯೂ ಈಗಾಗಲೇ ರಕ್ಷಿತ್ ಹೇಳಿಕೊಂಡಿದ್ದಾರೆ. ಆದರೆ, ಯಾರೇ ಈ ಸಿನಿಮಾವನ್ನು ಕನ್ನಡದಲ್ಲಿ ರಿಲೀಸ್ ಮಾಡಿದರೂ, ಆ ಸಿನಿಮಾವನ್ನು ತಾವು ನೋಡುವುದಿಲ್ಲ ಎಂದು ಹಿಂದೂಪರ ಸಂಘಟನೆಯವರು ಅನೇಕ ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ
ರಕ್ಷಿತ್ ಮುಖ ನೋಡಿ ಚಾರ್ಲಿ ನೋಡ್ತೀವಿ . ಆದರೆ, ಗಾರ್ಗಿ ಸಿನಿಮಾ ನೋಡಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಕೆಲವರು ಶುರು ಮಾಡಿದ್ದಾರೆ. ಸಾಯಿ ಪಲ್ಲವಿಯ ಸಿನಿಮಾವನ್ನು ಮಲಗಿಸಿಯೇ ಬಿಡಲು ಹಿಂದೂ ಸಮಾಜ ತೀರ್ಮಾನ ಮಾಡಿದೆ ಅಂತ ಅಭಿಯಾನ ಈಗಾಗಲೇ ಸೋಷಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ದೊಡ್ಡಮಟ್ಟದಲ್ಲೇ ಅಭಿಯಾನ ಮಾಡುವುದಾಗಿ ಬರೆದುಕೊಂಡಿದ್ದಾರೆ.