ಒಂದೆಡೆ ಪರಭಾಷಾ ನಟಿಯರಿಗೆ ಮಣೆ ಹಾಕೋದರ ವಿರುದ್ಧ ಕನ್ನಡಿಗರಿಂದ ಪ್ರತಿರೋಧ ವ್ಯಕ್ತವಾಗುತ್ತಾ ಬಂದಿದೆ. ಆದರೆ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕೆಲ ನಟಿಯರು ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಇಂಗಿತವೂ ಕನ್ನಡದ ಪ್ರೇಕ್ಷಕರಲ್ಲಿಯೇ ಇರುತ್ತೆ. ಆಯಾ ಕಾಲ ಘಟ್ಟಕ್ಕೆ ಫೇಮಸ್ ಆದ ನಟಿಯರು ಇನ್ನೇನು ಕನ್ನಡಕ್ಕೆ ಬಂದೇ ಬಿಟ್ಟರು ಎಂಬಂತೆ ಸುದ್ದಿ ಹಬ್ಬಿಸೋದು ಮಾಮೂಲಿ. ಆದರೆ ಸಾಯಿಪಲ್ಲವಿಯ ಅಭಿಮಾನಿಗಳು ಮಾತ್ರ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಲಿರೋದು ನಿಜ ಎಂದೇ ನಂಬಿ ಕೂತಿದ್ದಾರೆ.
ಸಾಯಿಪಲ್ಲವಿ ಮಲೆಯಾಳದ ಪ್ರಸಿದ್ಧ ಚಿತ್ರ ಪ್ರೇಮಂ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ನಟಿ. ಇದೊಂದು ಚಿತ್ರದ ನಂತರ ಈ ಹುಡುಗಿ ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಪಡೆದುಕೊಂಡ ರೀತಿ ಎಂಥವರೂ ಅಚ್ಚರಿಗೊಳ್ಳುವಂತಿದೆ. ಇಂಥಾ ಸಾಯಿಪಲ್ಲವಿಯನ್ನು ನಿರ್ದೇಶಕ ಮಹೇಶ್ ತಮ್ಮ ಮದಗಜ ಚಿತ್ರಕ್ಕೆ ನಾಯಕಿಯಾಗಿ ಕರೆತರುತ್ತಾರೆಂಬ ಮಾತು ಈಗೊಂದಷ್ಟು ದಿನಗಳಿಂದ ಕೇಳಿ ಬರುತ್ತಿದೆ.
ಇದರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ವಿಚಾರದಲ್ಲಿಯೂ ಸಾಯಿಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ ಇದುವರೆಗೂ ಕೂಡಾ ಚಿತ್ರತಂಡದ ಕಡೆಯಿಂದ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ.
ಆದರೆ ಸಾಯಿಪಲ್ಲವಿಯನ್ನು ಮನಸಾರೆ ಆರಾಧಿಸುವ ಒಂದಷ್ಟು ಕನ್ನಡದ ಅಭಿಮಾನಿಗಳು ಮಾತ್ರ ಆಕೆ ಬಂದೇ ಬರುತ್ತಾರೆಂಬ ನಂಬಿಕೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿದ್ದ ತಮಿಳಿನ ಮಾರಿ ಚಿತ್ರದ ರೌಡಿ ಬೇಬಿ ಹಾಡಿನ ಮೂಲಕವೇ ಪಡ್ಡೆಗಳನ್ನು ಹುಚ್ಚೆಬ್ಬಿಸಿರೋ ಸಾಯಿಪಲ್ಲವಿ ಕನ್ನಡಕ್ಕೆ ನಿಜಕ್ಕೂ ಬರ್ತಾರಾ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆಯಷ್ಟೇ.