ಕೊಪ್ಪಳ: ಕುರಿ ಸಂತೆ, ದನದ ಸಂತೆ, ತರಕಾರಿ ಸಂತೆಯಂತೆ ಇದು ಸಾಹಿತ್ಯ ಸಂತೆಯೂ ಸಹ ಒಂದು ಸಂತೆ. ಸಂಸ್ಕೃತದಲ್ಲಿ ಸಾಹಿತ್ಯ ಸಂತೆ ಎಂದರೆ ಗಂಭೀರ ಚಿಂತನೆ ಹಂಚುವುದು ಎಂಬ ಅರ್ಥವಿದೆ ಎಂದು ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ್ ಹೇಳಿದರು.
ನಗರದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಜಾನಪದ ಪರಿಷತ್, ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಕೊಪ್ಪಳಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ವಾರದ ಸಾಹಿತ್ಯ ಸಂತೆ ಮಾಲಿಕೆಗೆ ಹೆಚ್.ಎಸ್.ಪಾಟೀಲ್ ಅವರು ಚಾಲನೆ ನೀಡಿ ಮಾತನಾಡಿದರು. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್
ಈ ವೇಳೆ ಅವರು, ಸಾಹಿತಿಗಳು ಬರೆದ ಸಾಹಿತ್ಯ ಬದುಕಿನ ಗತಿಬಿಂಬ ಎಂಬುದನ್ನು ಅರಿಯಬೇಕು. ಪಂಪನ ಕಾಲದಿಂದ ಹಿಡಿದು ಇಲ್ಲಿಯವರೆಗಿನ ಸಾಹಿತಿಯ ಚಲನಶೀಲತೆಯನ್ನು ಓದಿ ಅರ್ಥೈಸಿಕೊಳ್ಳಬೇಕು. ತಮ್ಮ-ತಮ್ಮ ಅನುಭವವನ್ನು ಬರೆದು ಹೋಗಿದ್ದಾರೆ. ಜಿಲ್ಲೆಯಲ್ಲಿಯೂ ಅನೇಕ ಚಲನಶೀಲ ಗಟ್ಟಿಧ್ವನಿಯ ಕವಿಗಳು ಇದ್ದಾರೆ. ಕವಿಯೊಬ್ಬ ಹೇಳುವ ಹಾಗೆ ಕಷ್ಟವನ್ನು ಅನುಭವಿಸಿದ್ದರು ಒಳಮರ್ಮವನ್ನು ತಿಳಿಸುವುದೇ ನಿಜವಾದ ಸಾಹಿತ್ಯ. ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ಅನುಭವವನ್ನು ದಾಖಲಿಸುವ ಉತ್ತಮ ವೇದಿಕೆಯಾಗುತ್ತದೆ. ಅದು ಕಾಲ-ಕಾಲಕ್ಕೆ ಬೇರೆ ಆಗುತ್ತ ಹೋಗುತ್ತದೆ ಎಂದು ವಿವರಿಸಿದರು.
ಬದುಕೇ ಸಾಹಿತ್ಯ. ಅದನ್ನು ಈ ಸಂತೆಯಲ್ಲಿ ಹಂಚಲು ಹಮ್ಮಿಕೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಕವಿಗೆ ಕಿವಿ ಬೇಕು. ಅಂತಹ ಕಿವಿಗಳನ್ನು ತಂದು ಕೂಡಿಸಿ ನಾಡಿನಾದ್ಯಂತ ಅದನ್ನು ಪಸರಿಸುವ ಕೆಲಸ ಮಾಡುತ್ತಿರುವ ಸಂಘಟಕರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಅವರು ಲಕ್ಷ್ಮೀದೇವಿ ಪತ್ತಾರ ಗಂಗಾವತಿ ಅವರ ‘ಈಗ ಇದ್ದಂತೆ ಮುಂದೆ ಇರುವುದಿಲ್ಲ’ ಎನ್ನುವ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಕಿತ್ತೂರ್ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಾವಿತ್ರಿ ಮುಜುಮ್ದಾರ ಅಧ್ಯಕ್ಷತೆವಹಿಸಿ ಮಾತನಾಡಿದ್ದು, ವಾರದ ಸಾಹಿತ್ಯ ಸಂತೆ ಸಂಘಟಕರು ಲಿಂಗ ಸಮಾನತೆಗೆ ಒತ್ತುಕೊಟ್ಟು ವಿಶಿಷ್ಟ ಕಾರ್ಯಕ್ರಮ ಮಾಡಿದ್ದಾರೆ. ನನಗೆ ಸಂತೆಯ ಅಧ್ಯಕ್ಷತೆ ಕೊಟ್ಟಿದ್ದನ್ನು ಗಮನಿಸಿದ ಮನೆಯವರು ನಿನಗೆ ವಯಸ್ಸಾಯಿತು ಎಂಬುದಕ್ಕೆ ಸಾಕ್ಷಿ ಎಂದು ಹಾಸ್ಯ ಮಾಡಿದರು. ಇದನ್ನೂ ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!
ಕೊಪ್ಪಳವನ್ನು ಮತ್ತೆ ಸಾಹಿತ್ಯ ರಚನೆ, ಪ್ರಸಾರ ಮತ್ತು ಹಂಚುವಿಕೆಯ ಕಾರ್ಯಕ್ಕೆ ಸಂತೆ ಸಹಕಾರಿ ಎಂದರು. ಈಚೆಗೆ ಅಗಲಿದ ಹಿರಿಯ ಬಹುಭಾಷಾ ಗಾಯಕಿ ಲತಾ ಮಂಗೇಶ್ಕರ್ ಮತ್ತು ಆಧುನಿಕ ಸಂತ, ಭಾವೈಕ್ಯನಿಧಿ ಇಬ್ರಾಹಿಂ ಸುತಾರ ಅವರ ಶ್ರದ್ಧಾಂಜಲಿ ಮತ್ತು ಭಾಷಾ ಹಿರೇಮನಿ ಕಿನ್ನಾಳ, ವಿಜಯ್ಕುಮಾರ್ ಗೊಂಡಬಾಳ ಅವರ ಸಂಗೀತ ಕಾರ್ಯಕ್ರಮ ಜರುಗಿತು.