– ಕೇವಲ 50% ಸಫಾರಿ ಪ್ರಾರಂಭಕ್ಕೆ ಸರ್ಕಾರದಿಂದ ಅನುಮತಿ
ಬೆಂಗಳೂರು/ಚಾಮರಾಜನಗರ: ನಾಳೆಯಿಂದ ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭ ಆಗಲಿದೆ. ರಾಜ್ಯ ಸರ್ಕಾರ ಕೇವಲ 50% ಸಫಾರಿ ಪ್ರಾರಂಭಕ್ಕೆ ಅನುಮತಿ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ನಾಗರಹೊಳೆ, ಬಂಡೀಪುರದಲ್ಲಿ ಹುಲಿ ದಾಳಿಯಿಂದ ಅನೇಕ ಜನರು ಸಾವನ್ನಪ್ಪಿದ್ದರು. ನಮ್ಮ ಸರ್ಕಾರದ ಆದ್ಯತೆ ಮಾನವ ಜೀವ. ಪ್ರತಿ ಜೀವ ಅತ್ಯಮೂಲ್ಯವಾದದ್ದು. ಯಾವುದೇ ಜೀವಕ್ಕೆ ಹಾನಿಯಾಗಬಾರದು ಎಂದು ನ.7ರಿಂದ ಸಫಾರಿ ಬಂದ್ ಮಾಡಿ, ಆದೇಶ ಮಾಡಿದ್ವಿ. ಅರಣ್ಯ ಸಚಿವ ಆದ ಮೇಲೆ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನೇಕ ಕ್ರಮ ಕೈಗೊಂಡಿದ್ದೇವೆ. ಕ್ರಮ ಕೈಗೊಂಡರೂ ಕೂಡ ಪ್ರತಿ ವರ್ಷ 45-50 ಜನ ಸಾಯ್ತಾ ಇದ್ದಾರೆ. ಇದು ನೋವಿನ ಸಂಗತಿ. ಇದೀಗ ಮತ್ತೆ ನಾಗರಹೊಳೆ, ಬಂಡೀಪುರದಲ್ಲಿ ನಾಳೆಯಿಂದ (ಫೆ.19) ಸಫಾರಿ ಪುನರಾರಂಭ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
ಸಫಾರಿ ಸಮಯವನ್ನು 8 ಗಂಟೆಯಿಂದ 5 ಗಂಟೆಗೆ ಇಳಿಕೆ ಮಾಡಲಾಗಿದೆ. ಈ ಮೊದಲು ಬಳಕೆ ಮಾಡ್ತಿದ್ದ ಕೇವಲ 50% ವಾಹನ ಬಳಕೆಗೆ ನಿರ್ಧರಿಸಿದ್ದಾರೆ. ಬಂಡೀಪುರದಲ್ಲಿ 8 ಗಂಟೆಯಿಂದ 5 ಗಂಟೆಗೆ ಸಫಾರಿ ಇಳಿಕೆ ಮಾಡಲಾಗಿದ್ದು, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಫಾರಿ ಕ್ಲೋಸ್ ಆದ ಮೇಲೆ ಈ ವಿಚಾರದ ಬಗ್ಗೆ ವರದಿ ನೀಡಲು ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವು. ಜ.2ರಂದು ಸಿಎಂ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದೆವು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಿದ್ದು, ಮಧ್ಯಂತರ ವರದಿ ನೀಡಿದ್ದಾರೆ. ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇಟ್ಟಿದೆ. ಹೀಗಾಗಿ ಸಫಾರಿ ಹಂತ ಹಂತವಾಗಿ ಪುನರ್ ಆರಂಭ ಮಾಡಲು ನಿರ್ಧರಿಸಿದ್ದು, ನಾಳೆಯಿಂದ 50% ಸಫಾರಿ ಪ್ರಾರಂಭವಾಗಲಿದೆ. ಪೂರ್ತಿ ವರದಿ ಬಂದ ಬಳಿಕ 100% ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದಿದ್ದಾರೆ.
ಸಫಾರಿಯಿಂದ 20 ಕೋಟಿ ರೂ. ಹಣ ಬರ್ತಿದೆ. ಹೋಮ್ ಸ್ಟೇಗಳು, ರೆಸಾರ್ಟ್ಗಳು ಕಂದಾಯ ಇಲಾಖೆಯ ಅಧೀನದಲ್ಲಿ ಬರುತ್ತವೆ. ಸದ್ಯಕ್ಕೆ ಸುತ್ತಲಿನ ರೆಸಾರ್ಟ್, ಹೋಮ್ ಸ್ಟೇಗಳು, ಕ್ಯಾಂಪ್ ಫೈರ್ ನಿರ್ಬಂಧಕ್ಕೆ ಸೂಚನೆ ನೀಡಲಾಗಿದೆ. ಸಿಎಂ ನೇತೃತ್ವದಲ್ಲಿ ಈ ಬಗ್ಗೆ ಸಭೆ ಮಾಡಿ, ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತೀವಿ ಎಂದು ಹೇಳಿದ್ದಾರೆ.ಇದನ್ನೂ ಓದಿ: ಈಶ್ವರ್ ಖಂಡ್ರೆಗೆ ಅವಾಚ್ಯ ಶಬ್ದಗಳಿಂದ ನಿಂದನೆ – ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ FIR
ಇದೇ ವೇಳೆ ಚಿಕ್ಕಮಗಳೂರು ಆನೆ ತುಳಿತದಲ್ಲಿ ಸಾವನ್ನಪ್ಪಿದ ವಿಚಾರವಾಗಿ ಮಾತನಾಡಿ, ಕಾಫಿ ಎಸ್ಟೇಸ್ನಲ್ಲಿ ಆನೆ ಬಂದಿದೆ ಅಂತ ನಮಗೆ ಮಾಹಿತಿ ಕೊಟ್ಟಿದ್ದರು. ನಾವು ಅಲ್ಲಿಗೆ ಹೋಗೋ ಅಷ್ಟರಲ್ಲಿ ಎಸ್ಟೇಟ್ ಸಿಬ್ಬಂದಿಗಳು ಹೋಗಿ ಸಮಸ್ಯೆ ಆಗಿದೆ ಅಷ್ಟೆ. 2.15 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿದೆ. ಸುಮಾರು 7 ಸಾವಿರ ಎಕರೆ ನಾವು ಒತ್ತುವರಿ ತೆರವು ಮಾಡಲಾಗಿದೆ. ಇದೊಂದು ಅಪಾಯ ಕಾರ್ಯಾಚರಣೆ. ಸದ್ಯಕ್ಕೆ ನಾಗರಹೊಳೆ, ಬಂಡೀಪುರದಿಂದ ನಾಡಿಗೆ ಬಂದಿದ್ದ 28 ಹುಲಿಗಳನ್ನ ಸೆರೆಹಿಡಿದು ಕಾಡಿಗೆ ಬಿಡಲಾಗಿದೆ. ತಾಂತ್ರಿಕ ಸಮಿತಿ ಒಂದು ತಿಂಗಳಲ್ಲಿ ಸಂಪೂರ್ಣ ವರದಿ ನೀಡಿದ ಬಳಿಕ ಮತ್ತಷ್ಟು ಕ್ರಮ ತೆಗೆದುಕೊಳ್ತೀವಿ. ಸಫಾರಿ ವಾಹನಗಳಿಗೆ ಜಿಪಿಎಸ್, ಡ್ಯಾಶ್ ಕ್ಯಾಮ್ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ವನ್ಯಜೀವಿ ದಾಳಿಯಿಂದ ಒಳಗಾದವರ ಸಂಪೂರ್ಣ ಚಿಕಿತ್ಸೆ ವೆಚ್ಚ ಇಲಾಖೆ ಭರಿಸಲಿದೆ. ಸಿಬ್ಬಂದಿಗಳು ಸತ್ತರೆ 30 ರಿಂದ 50 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಜನರು ಸತ್ತರೆ 20 ಲಕ್ಷ ರೂ. ಇಲಾಖೆ ಕೊಡಲಿದೆ. ಗಾಯಾಳುಗಳ ಚಿಕಿತ್ಸೆ ವೆಚ್ಚ ಇಲಾಖೆ ಭರಿಸಲಿದೆ. ವನ್ಯಜೀವಿಗಳಿಂದ ಬೆಳೆ ನಾಶಕ್ಕೆ ಪರಿಹಾರ ಕೊಡಿಸುವ ಕೆಲಸ ನಾವು ಮಾಡ್ತಾ ಇದ್ದೇವೆ. ರೈತರಿಗೆ ಈವರೆಗೂ 50-60 ಕೋಟಿ ರೂ. ಪರಿಹಾರ ಕೊಡಲಾಗಿದೆ. ತಕ್ಷಣವೇ ಪರಿಹಾರ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಹುಲಿ, ಚಿರತೆಗಳಿಗೆ ಅರಣ್ಯದಲ್ಲಿ ಆಹಾರ ಕೊರತೆ ಇಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಇದೆ. ಆದ್ರೆ ಈಗ ಯಾಕೆ ನಾಡಿಗೆ ಬರ್ತಿದ್ದಾವೆ ಅಂತ ಪರಿಶೀಲನೆ ಮಾಡಬೇಕು ಅನ್ನಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬಜೆಟ್ನಲ್ಲೂ ಪರಿಹಾರಕ್ಕೆ ಹೆಚ್ಚು ಅನುದಾನ ನೀಡಲು ಸಿಎಂಗೆ ಮನವಿ ಮಾಡಿದ್ದೇವೆ. ಕಾಡಂಚಿನ ಗ್ರಾಮಗಳಿಗೆ ರಾತ್ರಿ ಹೊತ್ತು ಪವರ್ ಕೊಡಬೇಕು ಅಂತ ಸೂಚನೆ ನೀಡಲಾಗಿದೆ. ಆ ಗ್ರಾಮಗಳ ಅಭಿವೃದ್ಧಿಗೆ ಅಗತ್ಯ ಕ್ರಮಕ್ಕೆ ಪ್ರಸ್ತಾಪ ಸಲ್ಲಿಕೆ ಮಾಡಲು ಸೂಚನೆ ಕೊಡ್ತೀವಿ. ಸಿಎಂ ಸಂಬಂಧಪಟ್ಟ ಇಲಾಖೆಗಳ ಸಭೆ ಮಾಡಿ, ಆ ಭಾಗದ ಅಭಿವೃದ್ಧಿಗೆ ಕೆಲಸ ಮಾಡ್ತೀವಿ. ಬಜೆಟ್ನಲ್ಲಿ ನಮ್ಮ ಇಲಾಖೆಗೆ ಬಜೆಟ್ನ 1% ಹಣ ಕೊಡಲು ಕೇಳಿದ್ದೇವೆ. ಅಂದರೆ 4,500 ಕೋಟಿ ರೂ. ಕೇಳಿದ್ದೇವೆ. 500 ಕೋಟಿ ರೂ. ಹಣ ಅರಣ್ಯದ ಒಳಗೆ ಇರೋರನ್ನ ಶಿಫ್ಟ್ ಮಾಡಲು ಕೇಳಿದ್ದೇವೆ. ಕುದುರೆ ಮುಖದಲ್ಲೂ ಫ್ಯಾಮಿಲಿಗಳನ್ನ ಶಿಫ್ಟ್ ಮಾಡಲು ಹಣ ಕೇಳಿದ್ದೇವೆ ಎಂದಿದ್ದಾರೆ.ಇದನ್ನೂ ಓದಿ: ನಿಮ್ಮ ದಬ್ಬಾಳಿಕೆಗೆ ನಾವು ಹೆದರಲ್ಲ, ಇನ್ನಷ್ಟುಹೋರಾಟ ಮಾಡ್ತೀವಿ – ಡಿಕೆಶಿಗೆ ಧೀರಜ್ ಮುನಿರಾಜು ತಿರುಗೇಟು

