ಭೋಪಾಲ್: ಗೋಮೂತ್ರದಿಂದಾಗಿ ನನ್ನ ಸ್ತನ ಕ್ಯಾನ್ಸರ್ ವಾಸಿಯಾಯಿತು ಎಂದು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸ್ಪರ್ಧಿ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.
ರಾಷ್ಟೀಯ ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಾ ದೇಶದಲ್ಲಿ ಗೋವನ್ನು ರಾಜಕೀಯವಾಗಿ ಬಳಸಿಕೊಳ್ಳುವುದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ರು. ಹಲವು ಕಡೆಗಳಲ್ಲಿ ಗೋವುಗಳನ್ನು ಉಪಚರಿಸುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಗೋದಾನ ಮಾಡೋದು ಅಂದ್ರೆ ಅದು ಅಮೃತದಂತೆ ಉತ್ತಮವಾಗಿದೆ ಎಂದು ಹೇಳಿದರು.
ಗೋವು ಹಾಗೂ ಅದರ ಉತ್ಪನ್ನಗಳಿಂದ ಮನುಷ್ಯರ ಆರೋಗ್ಯಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳಾಗುತ್ತದೆ. ಅದರಲ್ಲೂ ಗೋವಿನ ಮೂತ್ರ ಕುಡಿದ ಪರಿಣಾಮ ನನ್ನ ಸ್ತನ ಕ್ಯಾನ್ಸರ್ ವಾಸಿಯಾಗಿದೆ. ಇದು ನನ್ನ ಆರೋಗ್ಯಕ್ಕಾದ ಬಹುದೊಡ್ಡ ಲಾಭ ಎಂದು ತಿಳಿಸಿದರು.
ಹೌದು. ನಾನೊಬ್ಬಳು ಕ್ಯಾನ್ಸರ್ ರೋಗಿಯಾಗಿದ್ದೇನೆ. ಹೀಗಾಗಿ ನಾನು ಗೋಮೂತ್ರದೊಂದಿಗೆ ಪಂಚಗವ್ಯ ಸೇರಿದಂತೆ ಆಯುರ್ವೇದದ ಕೆಲ ಮಿಶ್ರಣಗಳನ್ನು ನಿರಂತರವಾಗಿ ಸೇವಿಸುತ್ತಾ ಬಂದೆ. ಹೀಗಾಗಿ ಇಂದು ನಾನು ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖಳಾಗಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಗೋವಿನ ಹಿಂಭಾಗದಿಂದ ಅದರ ಕುತ್ತಿಗೆಯವರೆಗೆ ಮೈಸವರುತ್ತಾ ಬಂದರೆ ಏನೋ ಒಂಥರಾ ಖುಷಿಯಾಗುತ್ತದೆ. ಹಾಗೆಯೇ ಗೋವಿಗೂ ಕೂಡ ಮಜಾವಾಗುತ್ತದೆ. ಹೀಗಾಗಿ ಅವು ಕೂಡ ಮೈಯೊಡ್ಡಿ ನಿಲ್ಲುತ್ತಿತ್ತು. ಹೀಗೆ ಮಾಡಿದ್ದರಿಂದ ಬಿಪಿ ಕೂಡ ಸಹಜ ಸ್ಥಿತಿಗೆ ಬಂದಿದೆ ಎಂದು ಅವರು ವಿವರಿಸಿದ್ದಾರೆ.