ನವದೆಹಲಿ: ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇಂದು (ಸೋಮವಾರ) ಈಶ ಯೋಗ ಕೇಂದ್ರಕ್ಕೆ ಮರಳಿದ ಸದ್ಗುರು ಅವರನ್ನು ಕೊಯಮತ್ತೂರು ನಗರದಲ್ಲಿ ಅವರ ಭಕ್ತರು ಸ್ವಾಗತಿಸಿದ್ದಾರೆ.
ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಜನ ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ಸದ್ಗುರು ಆಗಮನವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಕೊಯಮತ್ತೂರಿನ ನಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಈಶ ಕೇಂದ್ರಕ್ಕೆ ಹೋಗುವ ರಸ್ತೆಗಳಲ್ಲಿ ನಿಂತು ಅವರ ದರ್ಶನ ಪಡೆದಿದ್ದಾರೆ. ಇನ್ನೂ ಈಶ ಕೇಂದ್ರದಲ್ಲಿ ಆದಿವಾಸಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸಾಂಪ್ರದಾಯಿಕ ಸಂಗೀತ, ಸುಮಧುರ ಡ್ರಮ್ಸ್ ಮತ್ತು ಜಾನಪದ ಹಾಡುಗಳೊಂದಿಗೆ ಸದ್ಗುರುಗಳನ್ನು ಸ್ವಾಗತಿಸಿದರು. ಇದನ್ನೂ ಓದಿ: ಚುನಾವಣಾ ಖರ್ಚಿಗಾಗಿ ಹೆಚ್ಡಿಕೆಗೆ 500 ರೂ. ಹಣ ಕೊಟ್ಟ ಅಭಿಮಾನಿ
ಸ್ಥಳೀಯ ಥಣಿಕಂಡಿ ಗ್ರಾಮದ ಆದಿವಾಸಿ ಮಹಿಳೆ, ವಿಜಯಾ ಎಂಬವರು ಮಾತನಾಡಿ, ಸದ್ಗುರುಗಳು ಯೋಗ ಸಾಧನೆ ಮೂಲಕ ನಮ್ಮ ಗ್ರಾಮವನ್ನು ಸಂತೋಷ ಮತ್ತು ಆರೋಗ್ಯದ ಗ್ರಾಮವನ್ನಾಗಿ ಪರಿವರ್ತಿಸಿದ್ದಾರೆ. ಅವರ ವೀಡಿಯೋಗಳನ್ನು ಕೇಳುತ್ತಾ, ನನ್ನ ಹಳ್ಳಿಯ ಯುವಕರು ಅಮಲು ಮತ್ತು ಆಲಸ್ಯದಿಂದ ದೂರ ಸರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಶಸ್ತ್ರಚಿಕಿತ್ಸೆಯ ಸುದ್ದಿ ಬಂದಾಗ, ನಾವು ತೀವ್ರ ಕಳವಳಗೊಂಡಿದ್ದೆವು. ಅವರು ಆರೋಗ್ಯವಾಗಿ ಮರಳಿರುವುದು ನಮಗೆ ಖುಷಿ ನೀಡಿದೆ ಎಂದಿದ್ದಾರೆ.
ಮಾ.27 ರಂದು ನವದೆಹಲಿಯಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು. ಇದೀಗ ಸುರಕ್ಷಿತವಾಗಿ ಅವರು ಮರಳಿರುವುದು ಅವರ ಅನುಯಾಯಿಗಳಲ್ಲಿ ಸಂಭ್ರಮ ಉಂಟು ಮಾಡಿದೆ. ಜನ ಸ್ವಾಗತ ಕೋರಿರುವ ವೀಡಿಯೋವನ್ನು ಈಶ ಫೌಂಡೇಷನ್ ಹಾಗೂ ಅವರ ಅನುಯಾಯಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 41 ಕೋಟಿ ರೂ. ಆಸ್ತಿ ಘೋಷಿಸಿದ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್