ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿಯ ಕುರಿತು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಸದ್ಯ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಧೋನಿ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದರು. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿನ್, ಯಾವುದೇ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ನಿವೃತ್ತಿಯ ಬಗ್ಗೆ ಆತನೇ ನಿರ್ಣಯಕೈಗೊಳ್ಳಬೇಕು. ನಿರಂತರವಾಗಿ ತಂಡದ ಶಕ್ತಿಯಾಗಿದ್ದ ಆಟಗಾರನಿಗೆ ಆ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ವಿರುತ್ತದೆ. ಅದ್ದರಿಂದ ಈ ನಿರ್ಧಾರವನ್ನು ಅವರಿಗೆ ಬಿಟ್ಟರೆ ಒಳ್ಳೆಯದು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.
ಆಟಗಾರರ ಕೆಲವೇ ಪ್ರದರ್ಶನಗಳಿಂದ ಅವರ ಸಾಮರ್ಥ್ಯ ಕುರಿತು ಟೀಕೆ ಮಾಡುವುದು ಉತ್ತಮವಲ್ಲ. ಧೋನಿ ಹಲವು ಭಿನ್ನ ಸಮಯದಲ್ಲಿ ಟೀಂ ಇಂಡಿಯಾ ತಂಡದ ಭಾಗವಾಗಿದ್ದರು. ಅವರು ತಮ್ಮ ಆಟವನ್ನು ವಿಮರ್ಶಿಸಿಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ಅದರಂತೆ ಅವರು ನಿವೃತ್ತಿ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲರು ಅವರು ನಿರ್ಣಯ ತೆಗೆದುಕೊಳ್ಳಲು ಬಿಡಬೇಕು ಎಂದರು.
ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ನಿವೃತ್ತಿ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಅಲ್ಲದೇ ಭಾರತದ ಮಾಜಿ ಆಟಗಾರರಾದ ಸುನಿಲ್ ಗವಸ್ಕರ್ ಹಾಗೂ ಸೌರವ್ ಗಂಗೂಲಿ ಸಹ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಧೋನಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಸ್ಪಷ್ಟನೆ ನೀಡಿ, ಧೋನಿ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದ್ದರು.