ಜೈಪುರ: ಕಾಂಗ್ರೆಸ್ (Congress) ನಾಯಕ ಸಚಿನ್ ಪೈಲಟ್ (Sachin Pilot) ಮಂಗಳವಾರ ಜೈಪುರದಲ್ಲಿ (Jaipur) ಗೆಹ್ಲೋಟ್ ಸರ್ಕಾರವನ್ನು ಗುರಿಯಾಗಿಸಿಟ್ಟುಕೊಂಡು ಉಪವಾಸ ಸತ್ಯಾಗ್ರವನ್ನು (Fasting) ಪ್ರಾರಂಭಿಸಿದ್ದಾರೆ.
ಬಿಜೆಪಿ ನಾಯಕಿ ಹಾಗೂ ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಚಿನ್ ಪೈಲಟ್ ಭಾನುವಾರ ಏಪ್ರಿಲ್ 11 ರಂದು 1 ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸುವುದಾಗಿ ತಿಳಿಸಿದ್ದರು.
ಸಚಿನ್ ಪೈಲಟ್ ಪಕ್ಷ ವಿರೋಧಿ ನಡೆಯನ್ನು ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದ್ದು, ಉಪವಾಸ ಸತ್ಯಾಗ್ರಹವನ್ನು ಮಾಡದಂತೆ ಸೋಮವಾರ ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಸಚಿನ್ ಪೈಲಟ್ ಜೈಪುರದ ಶಹೀದ್ ಸ್ಮಾರಕ ಸ್ಥಳದಲ್ಲಿ ಕುಳಿತುಕೊಂಡು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಅವರ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?
2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಮುಖ್ಯಮಂತ್ರಿ ಪದವಿಗೆ ಸಂಬಂಧಿಸಿದಂತೆ ಗೆಹ್ಲೋಟ್ ಹಾಗೂ ಪೈಲಟ್ ನಡುವೆ ಭಿನ್ನಾಭಿಪ್ರಾಯಗಳು ಎದ್ದಿವೆ. ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕು ಎಂದು 2022ರ ಜುಲೈನಲ್ಲಿ ಆಗ್ರಹಿಸಿ ಪೈಲಟ್ ಹಾಗೂ ಅವರ ಬೆಂಬಲಿಗ 18 ಶಾಸಕರು ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಇದು ರಾಜ್ಯದಲ್ಲಿ 1 ತಿಂಗಳ ಕಾಲ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು.
ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದ ಗೆಹ್ಲೋಟ್, ನನ್ನ ಸರ್ಕಾರ ಉರುಳಿಸಲು ಪೈಲಟ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಕೆಲ ತಿಂಗಳುಗಳ ಹಿಂದೆಯೂ ಪೈಲಟ್ ನಂಬಿಕೆ ದ್ರೋಹಿ ಎಂದು ಗೆಹ್ಲೋಟ್ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡಿ ಹಂಚಿದ್ದ ಡಿಕೆಶಿಗೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ