ಮಡಿಕೇರಿ: ಭೀಕರ ಬರಗಾಲದ ನಡುವೆಯೇ ಸಿಎಂ ಕುಮಾರಸ್ವಾಮಿ ಮಡಿಕೇರಿಯಲ್ಲಿರುವ ಇಬ್ಬನಿ ರೆಸಾರ್ಟ್ ಗೆ ಹೋಗಿದ್ಯಾಕೆ? ಈ ಬಗ್ಗೆ ಜೆಡಿಎಸ್ ಸಚಿವರು ತಮ್ಮದೇ ವ್ಯಾಖ್ಯಾನ ಕೊಡುತ್ತಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಸಾರಾ ಮಹೇಶ್, ಮುಖ್ಯಮಂತ್ರಿ ಇರಬಹುದು, ಸಚಿವರೇ ಇರಬಹುದು. ಎಲ್ಲರಿಗೂ ತಮ್ಮದೇ ಆದ ಖಾಸಗಿ ಜೀವನ ಇರುತ್ತದೆ. ಒಮ್ಮೊಮ್ಮೆ ಯಂತ್ರಗಳು ಕೂಡಾ ಕೆಟ್ಟು ಹೋಗುತ್ತವೆ. ಅವಕ್ಕೂ ರೆಸ್ಟ್ ಬೇಕಾಗುತ್ತದೆ. ಹೀಗಾಗಿ ನಮಗೂ ವಿಶ್ರಾಂತಿ ಬೇಕಾಗುತ್ತದೆ. ಅದಕ್ಕಾಗಿ ಸಿಎಂ ಕುಮಾರಸ್ವಾಮಿ ಇಲ್ಲಿಗೆ ರೆಸ್ಟ್ ಗಾಗಿ ಬಂದಿದ್ದಾರೆ ಅಷ್ಟೆ ಎಂದರು.
ಅವರ ಸೂಚನೆ ಮೇರೆಗೆ ಇಂದು ಮಡಿಕೇರಿಯಲ್ಲಿ ಸಭೆ ನಡೆಸುತ್ತಿದ್ದೇನೆ. ಮಡಿಕೇರಿ ವಾಸ್ತವ್ಯಕ್ಕೆ ಸುರಕ್ಷಿತ ಅಂತ ರಾಜ್ಯದ ಜನತೆಗೆ ತಿಳಿಸಲು ಮಾಜಿ ಸಿಎಂ ಮತ್ತು ಹಾಲಿ ಸಿಎಂ ಒಂದೇ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆಯಿಂದ ಎಂದಿನಂತೆ ಸರ್ಕಾರಿ ಕಾರ್ಯಕ್ರಮಗಳು ಶುರುವಾಗುತ್ತವೆ ಎಂದು ಸಾರಾ ಮಹೇಶ್ ತಿಳಿಸಿದ್ದಾರೆ.
23ರ ನಂತರ ರಾಜ್ಯದಲ್ಲಿ ಗೇಮ್ಪ್ಲಾನ್ ಆಗಲಿದೆ ಎನ್ನೊ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸರ್ಕಾರ ರಚಿಸಿದ ದಿನದಿಂದಲೂ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿದರು.