ಕೊಪ್ಪಳ/ಮೈಸೂರು: ಕೆಲವು ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅವರು ಭಾನುವಾರವೂ ಸಂಪರ್ಕಿಸಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ ಮಹೇಶ್ ಆರೋಪಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಬಿಜೆಪಿಯವರಿಗೆ ಅಧಿಕಾರದ ಭ್ರಮೆ ಹಿಡಿದುಬಿಟ್ಟಿದೆ. ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್ ಮಾಡುತ್ತಾರೆ. ಅವರಿಗೆ ಎಲ್ಲಿಂದ ಈ ಹಣ ಬರುತ್ತಿದೆ. ಅಲ್ಲದೆ ಒಂದು ವಾರ ಹರಿಯಾಣದ ಸ್ಟಾರ್ ಹೊಟೇಲಿನಲ್ಲಿ ಉಳಿದುಕೊಂಡಿದ್ದರಲ್ವ ಅದಕ್ಕೂ ಎಲ್ಲಿಂದ ಹಣ ಬಂದಿದೆ. 50 ಕೋಟಿ ರೂ.ನಂತೆ 20 ಶಾಸಕರಿಗೆ ಆಫರ್ ಮಾಡ್ತಾರೆ. ಈ ದುಡ್ಡು ಅವರಿಗೆ ಎಲ್ಲಿಂದ ಬರುತ್ತದೆ. ಸಾರ್ವಜನಿಕರ ಹಣವನ್ನು ಅವರು ಲೂಟಿ ಹೊಡೆದಿದ್ದಾರೆ. ಇದೀಗ ಮತ್ತೆ ಲೂಟಿ ಹೊಡೆಯಲು ಅವರಿಗೆ ಅಧಿಕಾರ ಬೇಕು ಎಂದು ಹೇಳಿದ್ರು.
ಸಾರಾ ಮಹೇಶ್ ಆರೋಪವೇನು..?
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಾ.ರಾ ಮಹೇಶ್, ಕೆಲವರನ್ನು ಅಧಿವೇಶನಕ್ಕೆ ಬಾರದಂತೆ ತಡೆಯಲು ಬಿಜೆಪಿ ಮುಂದಾಗಿದೆ. ಬಿಜೆಪಿ ಅವರು ಕೆಲ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಹಣ ಹಾಗೂ ಮಂತ್ರಿ ಸ್ಥಾನದ ಅಮಿಷವೊಡ್ಡಿದ್ದಾರೆ. ಬಿಜೆಪಿ ಅವರು ಹೇಗೆ ಶಾಸಕರನ್ನು ಮಂತ್ರಿ ಮಾಡುತ್ತಾರೋ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ನಾವು ಸಿಎಂ ಕುಮಾರಸ್ವಾಮಿ ಗಮನಕ್ಕೆ ತಂದಿದ್ದೇವೆ. ಖುದ್ದು ಶಾಸಕರೇ ಬಿಜೆಪಿ ಅವರು ತಮ್ಮನ್ನು ಸಂಪರ್ಕಿಸಿರುವ ಬಗ್ಗೆ ಸಿಎಂಗೆ ತಿಳಿಸಿದ್ದಾರೆ. ಬಿಜೆಪಿಯವರು ದಿನ ಒಂದೊಂದು ಸುಳ್ಳು ಹೇಳುತ್ತಾ ಸರ್ಕಾರ ಸ್ಥಿರವಾಗಿಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆಸಿದೆ ಎಂದು ಟೀಕಿಸಿದರು.
ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ನಾಯಕರು ತಿಳುವಳಿಕೆ ಹೇಳಬೇಕು. ನಾವು ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಬಿಜೆಪಿ ಅಧಿಕಾರದ ದಾಹದಿಂದ ನಮಗೆ ತೊಂದರೆ ಕೊಡುತ್ತಿದೆ. ಈಗ ಕೊನೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನರು ಇದೆಲ್ಲವನ್ನು ನೋಡುತ್ತಿದ್ದಾರೆ. ಬಿಜೆಪಿ ಇಂತಹ ಅಸಹ್ಯ ರಾಜಕಾರಣ ಮಾಡಬಾರದು ಎಂದ ಅವರು, ಹಿಂದೆ ಹೇಳಿದಂತೆ ಬಿಜೆಪಿಯ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನೀವೇ ಕಾದು ನೋಡಿ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv