ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹಾಗೂ ತಮ್ಮನ್ನು ಸಾರ್ವಜನಿಕವಾಗಿ ಶ್ರೀಶಾಂತ್ ನಿಂದಿಸಿದ್ದರು ಎಂದು 2013ರಲ್ಲಿ ರಾಜಸ್ಥಾನ ರಾಯಲ್ಸ್ ಕೋಚ್ ಆಗಿದ್ದ ಪ್ಯಾಡಿ ಅಪ್ಟನ್ ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ಕೋಚ್ ಪ್ಯಾಡಿ ಅಪ್ಟನ್ ಅವರ ‘ದ ಬೇರ್ ಫೋಟ್ ಕೋಚ್’ ಎಂಬ ಪುಸ್ತಕ ಬರೆದಿದ್ದು, ಈ ಪುಸ್ತಕದಲ್ಲಿ ಶ್ರೀಶಾಂತ್ ನಡವಳಿಕೆ ಕುರಿತು ಬರೆದುಕೊಂಡಿದ್ದಾರೆ.
2013 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಹುಲ್ ದ್ರಾವಿಡ್ ನಾಯಕರಾಗಿ ಮುನ್ನಡೆಸುತ್ತಿದ್ದರು. ಪ್ಯಾಡಿ ಅಪ್ಟನ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಶ್ರೀತಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಅವರ ಬಂಧನ ಆಗುವ ಮುನ್ನ ನಡೆದ ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ಇದರಿಂದ ಕೋಪಗೊಂಡ ಶ್ರೀಶಾಂತ್ ತಂಡದ ನಾಯಕರಾಗಿದ್ದ ದ್ರಾವಿಡ್ ಹಾಗೂ ತಮ್ಮನ್ನು ನಿಂದಿಸಿದ್ದರು ಎಂದು ವಿವರಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಆರೋಪದ ಅಡಿಯಲ್ಲಿ 2013ರ ಮೇ 16 ರಂದು ಶ್ರೀಶಾಂತ್ ಬಂಧನವಾಗಿತ್ತು. ಅದಕ್ಕೂ ಮುನ್ನ ಶ್ರೀಶಾಂತ್ ಅಸಭ್ಯ ವರ್ತನೆ ತೋರಿದ್ದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪರಿಣಾಮ ಅವರಿಗೆ ತಂಡದಿಂದ ಕೈಬಿಟ್ಟಿರುವ ವಿಚಾರ ಶ್ರೀಶಾಂತ್ಗೆ ತಿಳಿಸಲಾಗಿತ್ತು. ಈ ವಿಚಾರಕ್ಕೆ ಅವರಿಗೆ ಕೋಪ ಬಂದಿತ್ತು. ತಂಡದ ಸಹ ಆಟಗಾರರ ಎದುರೇ ಅವಾಚ್ಯ ಪದ ಪ್ರಯೋಗ ಮಾಡಿದ್ದರು ಎಂದು ತಿಳಿಸಿದ್ದಾರೆ.
ಕೋಚ್ ಪ್ಯಾಡಿ ಅವರ ಬರಹದ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಪ್ಯಾಡಿ ಒಬ್ಬ ಸುಳ್ಳುಗಾರ, ನಾನು ಎಂದು ಸಹ ಆಟಗಾರರೊಂದಿಗೆ ಈ ರೀತಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.