ಕಾರವಾರ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬಿಸ್ಕೇಟ್ ಎಸೆದು ವಿವಾದಕ್ಕೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿ ಎಸೆದು ದರ್ಪ ಮೆರೆದಿದ್ದಾರೆ.
ಜಿಲ್ಲೆಯ ಹಳಿಯಾಳದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನೂತನ ಒಳಾಂಗಣ ಕ್ರೀಡಾಂಗಣ ಕಟ್ಟಡ ಉದ್ಘಾಟನೆ ಆಯೋಜಿಸಲಾಗಿತ್ತು. ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿದ ಕ್ರೀಡಾ ಪಟುಗಳು ಹಾಗೂ ಸಂಘಗಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆದಿತ್ತು. ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ
ಕಾರ್ಯಕ್ರಮದ ಬಳಿಕ ಸಚಿವರು ಕ್ರೀಡಾಪಟುಗಳಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸಲು ಮುಂದಾಗಿದ್ದರು. ಆಗ ಸಾಮಗ್ರಿಗಳನ್ನು ಪಡೆಯಲು ಕ್ರೀಡಾಪಟು ಸ್ವಲ್ಪ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಸಚಿವರು ವೇದಿಕೆಯಿಂದಲೇ ಕಿಟ್ ಎಸೆದಿದ್ದಾರೆ. ಅಷ್ಟೇ ಅಲ್ಲದೆ ಲಗೂ ಬರ್ರೀ ಪಾ.. ತಗೊಂಡು ಹೋಗಾಕ ಹರಸಾಹಸ ಪಡತಿರಲ್ಲ ಎಂದು ಲೇವಡಿ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಪಟುಗಳ ಮೇಲೆ ದರ್ಪ ಮೆರೆದು ಸಚಿವರು ಅಗೌರವ ತೋರಿದ್ದಾರೆ. ಸಚಿವರ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv