ನವದೆಹಲಿ: ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 2ನೇ ಬಾರಿ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.
ಉಭಯ ದೇಶಗಳ ನಾಯಕರು ಉಕ್ರೇನ್ನಲ್ಲಿನ ಸಧ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ರಷ್ಯಾ ಭೀಕರ ದಾಳಿಗೆ ತುತ್ತಾಗಿರುವ ಉಕ್ರೇನ್ನ ಪ್ರಮುಖ ನಗರವೂ ಆದ ಖಾರ್ಕಿವ್ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರ ಸುರಕ್ಷಿತ ಸ್ಥಳಾಂತರ ಕುರಿತು ಪುಟಿನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಪುಟಿನ್ ತಪ್ಪು ಹೆಜ್ಜೆಗಳು – ರಷ್ಯಾ ಹಿನ್ನಡೆಗೆ ಕಾರಣ ಏನು?
ಉಕ್ರೇನ್ನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತು ಪುಟಿನ್ ಅವರಿಗೆ ಮೋದಿ ಮನವರಿಕೆ ಮಾಡಿದ್ದಾರೆ. ಯಾವುದೇ ತೊಂದರೆ ಇಲ್ಲದೇ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ವಿಚಾರವಾಗಿ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬಳಿಕ ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯದಿಂದ ಭಾರತ ತಟಸ್ಥವಾಗಿ ಉಳಿದಿದೆ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ
ಭಾರತದ ನಿಲುವಿನಿಂದಾಗಿ ಉಕ್ರೇನ್ ಮತ್ತು ರಷ್ಯಾದ ಸೈನಿಕರು, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಉಕ್ರೇನ್ನಲ್ಲಿ ಸಿಲುಕಿದ್ದವರಲ್ಲಿ ಭಾರತದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಸುರಕ್ಷಿತ ಸ್ಥಳಾಂತರ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ.