ಧಾರವಾಡ: ಉಕ್ರೇನ್ನಲ್ಲಿ ಧಾರವಾಡದ ಮತ್ತೋರ್ವ ವಿದ್ಯಾರ್ಥಿನಿ ಸಿಲುಕಿಕೊಂಡಿದ್ದು ಸಂಪರ್ಕಕ್ಕೆ ಸಿಗದೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮೆಹಬೂಬ ನಗರದ ಫೌಜಿಯಾ ಮುಲ್ಲಾ ಉಕ್ರೇನ್ದಲ್ಲಿ ಸಿಲುಕಿದ ವಿದ್ಯಾರ್ಥಿನಿ. ಧಾರವಾಡದಲ್ಲಿ ಇರುವ ಈ ವಿದ್ಯಾರ್ಥಿನಿಯ ಕುಟುಂಬದವರು ಸತತವಾಗಿ ವಿದ್ಯಾರ್ಥಿನಿಗೆ ಸಂಪರ್ಕ ಮಾಡುತ್ತಿದ್ದಾರೆ. ಆದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ನಿನ್ನೆ ಕರೆ ಮಾಡಿದ್ದ ಫೌಜಿಯಾ, ಆರಾಮಾಗಿ ಇದ್ದೇವೆ. ರಾಯಭಾರಿ ಕಚೇರಿ ಸಂಪರ್ಕದಲ್ಲಿದ್ದೇವೆ ಎಂದಿದ್ದಳು.
ರಾಯಭಾರ ಕಚೇರಿ ನಿನ್ನೆ ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಹೇಳಿತ್ತು. ಆದರೆ ಫೌಜಿಯಾ ನಿನ್ನೆ ಸಂಜೆ ಮಾಡಿದ್ದ ಕರೆಯೇ ಕೊನೆಯದಾಗಿರುವುದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಫೌಜಿಯಾ ತಂದೆ ಮಹಮ್ಮದ್ ಇಸಾಕ್ ಅವರು, ನಮ್ಮ ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು, ನಮ್ಮ ರಾಜ್ಯದ ಅನೇಕರು ಫೌಜಿಯಾ ಅವಳ ಜೊತೆಯಲ್ಲಿದ್ದಾರಂತೆ ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್ ಟವರ್ನಲ್ಲಿ ಉಕ್ರೇನ್ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್ ಅಭಯ
ಟರ್ನಾಪಿಲ್ ನಗರದಲ್ಲಿ ಸಿಲುಕಿರುವ ಯುವತಿ ಬಳಿ 8 ದಿನಕ್ಕೆ ಆಗುವಷ್ಟು ಆಹಾರ ಇದೆ ಎಂದು ಮಾಹಿತಿ ನೀಡಿದ ಅವರು, ಡಿಸೆಂಬರ್ಲ್ಲಿ ಅವಳು ಉಕ್ರೇನ್ಗೆ ಹೋಗಿದ್ದಳು. ವಾಪಸ್ ಬರಲು ಕತಾರ ಏರಲೈನ್ಸ್ಗೆ ಟಿಕೆಟ್ ಸಹ ಬುಕ್ ಮಾಡಿದ್ದಳು ಎಂದು ಹೇಳಿದರು. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ