ದಾವಣಗೆರೆ: ಮುಂಗಾರು ಶುರುವಾಗಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಕೆಲ ಕಡೆ ಉತ್ತಮ ಬೆಳೆಯಾಗಿದ್ದು, ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿ ದಾವಣಗೆರೆಯ ಹೆಬ್ಬಾಳು ಗ್ರಾಮದ ರುದ್ರೇಶ್ವರ ಮಠದ ಮಹಾಂತ ಸ್ವಾಮೀಜಿಗಳು ಸ್ವತಃ ತಾವೇ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬಿದ್ದ ಮಳೆಗೆ ಮೆಕ್ಕೆಜೋಳ ಬೆಳೆ ಹಸನಾಗಿ ಬೆಳೆದಿದ್ದು, ಮಹಾಂತ ಸ್ವಾಮೀಜಿಗಳು ಸ್ವತಃ ತಾವೇ ಎಡೆಕುಂಟೆ ಹೊಡೆದು ಮಾದರಿಯಾಗಿದ್ದಾರೆ. ಮಠದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದಲ್ಲಿ ಕಳೆ ಇದ್ದು ಸ್ವತಃ ಸ್ವಾಮೀಜಿಗಳೇ ಎಡೆಕುಂಟೆ ಹೊಡೆದು ಕಳೆ ತೆಗೆದಿದ್ದಾರೆ.
ಶ್ರೀಗಳು ಕೇವಲ ಕೃಷಿಯೊಂದೆ ಅಲ್ಲ ಗೋವುಗಳನ್ನು ಸಂರಕ್ಷಿಸುವುದು, ಭಕ್ತರಿಗೆ ಉಚಿತವಾಗಿ ನಾಟಿ ಔಷಧಿಯನ್ನು ನೀಡುತ್ತಿದ್ದು ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಲಿದ್ದಾರೆ. ಮಹಾಂತ ಸ್ವಾಮೀಜಿಗಳು ಕಾವಿ ತೊಟ್ಟು ಕೃಷಿ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದ್ದಾರೆ.