– ಪ್ರತಿ ಸಂಘಟನೆಯಿಂದ ಮೂವರು ಭಾಗಿಯಾಗಲು ಕೋರ್ಟ್ ಸೂಚನೆ
ಬೆಂಗಳೂರು/ಕಲಬುರಗಿ: ರಾಜ್ಯದಲ್ಲಿ ತೀವ್ರ ಕೂತೂಹಲ ಕೆರಳಿಸಿರುವ ಚಿತ್ತಾಪುರ ಆರ್ಎಸ್ಎಸ್ ಪಥಸಂಚಲನ (Chittapur RSS Route March) ಕುರಿತು, ಕಲಬುರಗಿಯ ಹೈಕೋರ್ಟ್ ಪೀಠ ಇಂದು ಮಹತ್ವದ ಸೂಚನೆ ನೀಡಿದೆ. ನವೆಂಬರ್ 5ಕ್ಕೆ ಬೆಂಗಳೂರಿನಲ್ಲಿ ಶಾಂತಿಸಭೆ ನಡೆಸಲು ಸೂಚನೆ ನೀಡಿದ್ದು, ನ.7ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿದೆ.
ಹೌದು. ಆರ್ಎಸ್ಎಸ್ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಮತ್ತೊಂದೆಡೆ 5 ಸಂಘಟನೆಗಳು ಅಂದೇ ನಮಗೂ ಅವಕಾಶ ಕೊಡಿ ಎಂದು ಅರ್ಜಿ ಹಾಕಿದ್ದವು. ಈ ಎಲ್ಲಾ ಅರ್ಜಿಗಳ ಮೊದಲ ಸುತ್ತಿನ ವಿಚಾರಣೆ ನಡೆಸಿದ್ದ ಕಲಬುರಗಿಯ ಹೈಕೋರ್ಟ್ (Kalaburagi High Court) ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಏಕ ಸದಸ್ಯ ಪೀಠ ಅ28ಕ್ಕೆ ಎಲ್ಲಾ 8 ಸಂಘಟನೆಗಳ ಜೊತೆ ಶಾಂತಿ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಜಿಲ್ಲಾಡಳಿತ ನೇತೃತ್ವದಲ್ಲಿ ನಡೆದ ಶಾಂತಿಸಭೆಯಲ್ಲಿ ಒಮ್ಮತಕ್ಕೆ ಬಾರದ ಹಿನ್ನೆಲೆ ಕೋರ್ಟ್ ಮತ್ತೊಂದು ಅವಕಾಶ ನೀಡಿದೆ. ನ.5ರಂದು ಮತ್ತೊಮ್ಮೆ ಬೆಂಗಳೂರಲ್ಲಿ ಶಾಂತಿ ಸಭೆ ನಡೆಸಲು ಸೂಚಿಸಿದ್ದು, ನ.7ಕ್ಕೆ ವಿಚಾರಣೆ ಮುಂದೂಡಿದೆ.
ಅದರಂತೆ ನವೆಂಬರ್ 5ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಎಜಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಕೋರ್ಟ್ ಸೂಚನೆ ಮೇರೆಗೆ ಅರ್ಜಿದಾರರು ಮತ್ತು ಎಜಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ.7ರಂದು ಮತ್ತೆ ವಿಚಾರಣೆ ನಡೆಯಲಿದೆ. ಹೀಗಾಗಿ ನ.2ರಂದು ನಡೆಯಬೇಕಿದ್ದ ಆರ್ಎಸ್ಎಸ್ ಪಥಸಂಚನಲ ಮುಂದೂಡಿಕೆಯಾಗಲಿದೆ. ಇದನ್ನೂ ಓದಿ: ಹೈಕೋರ್ಟ್ ತೀರ್ಪು ಪಾಲಿಸುತ್ತೇವೆ, ಎಲ್ಲರಿಗೂ ಸಮಾನ ಅವಕಾಶ ನೀಡಿ: ಕಲಬುರಗಿ ಆರ್ಎಸ್ಎಸ್
ಶಾಂತಿಸಭೆಗೆ ಒಪ್ಪಿದ ಎಜಿ ಶಶಿಕಿರಣ್ ಶೆಟ್ಟಿ
ಜಿಲ್ಲಾಡಳಿತ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಹಕರಿಸಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಶಾಂತಿ ಸಭೆ ನಡೆಸುವ ಸ್ಥಳದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಪ್ರತಿ ಸಂಘಟನೆಯಿಂದ ಮೂರು ಜನರು ಭಾಗಿಯಾಗಲು ಅವಕಾಶ ಇರಲಿದೆ ಎಂದು ಕೋರ್ಟ್ ಹೇಳಿತು. ಕೋರ್ಟ್ ಸೂಚನೆಯನ್ನ ಎಜಿ ಶಶಿಕಿರಣ್ ಶೆಟ್ಟಿ ಸ್ವಾಗತಿಸಿದರು.
ಆರ್ಎಸ್ಎಸ್ ಅಕ್ಟೋಬರ್ 19 ರಂದೇ ಪಥಸಂಚಲನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಆದರೆ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಮತ್ತು ಹಲವು ಸಂಘಟನೆಗಳು ಪಥಸಂಚಲನಕ್ಕೆ ಅನುಮತಿ ಕೋರಿದ್ದರಿಂದ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಕಾನೂನು ಸುವ್ಯವಸ್ಥೆ ಕಾರಣ ನೀಡಿ ತಡೆ ನೀಡಿದ್ದರು. ಇದನ್ನೂ ಓದಿ: ಚಿತ್ತಾಪುರ ಶಾಂತಿ ಸಭೆಯಲ್ಲಿ ಅಶಾಂತಿ, ಸಂಘಟನೆಗಳ ಮಧ್ಯೆ ಮೂಡದ ಒಮ್ಮತ: ಇಂದು ಏನಾಯ್ತು?

