– ಮೋದಿ ಉತ್ತರ ಕುಮಾರ ಇದ್ದಂತೆ
– 5 ವರ್ಷದಲ್ಲಿ 19 ದಿನ ಮಾತ್ರ ಸಂಸತ್ತಿಗೆ ಹಾಜರ್
ಬೆಂಗಳೂರು: ಆರ್ಎಸ್ಎಸ್ ಸಂಘಟನೆಯನ್ನು ‘ರಿಲಯನ್ಸ್ ಸೇವಾ ಸಂಘ’ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಡಿ.ಕೆ ಸುರೇಶ್ ಪರ ಆನೇಕಲ್ನಲ್ಲಿ ರೋಡ್ ಶೋ ನಲ್ಲಿ ಪಾಲ್ಗೊಂಡು ಮಾತನಾಡಿದ ರಾಮಲಿಂಗಾರೆಡ್ಡಿ, ಈ ದೇಶದಲ್ಲಿ ಎರಡು ಆರ್ಎಸ್ಎಸ್ ಇದೆ. ಒಂದು ರಾಷ್ಟ್ರೀಯ ಸ್ವಯಂ ಸೇವಕರ ಸಂಘ. ಅವರು ಮೊದಲು ಚಡ್ಡಿ ಹಾಕಿಕೊಳ್ಳುತ್ತಿದ್ದರು. ಈಗ ಪ್ಯಾಂಟ್ ಹಾಕುತ್ತಿದ್ದಾರೆ. ಇನ್ನೊಂದು ಆರ್ಎಸ್ಎಸ್ ಏನೆಂದರೆ ಅದು ರಿಲಯನ್ಸ್ ಸೇವಾ ಸಂಘ. ರಿಲಯನ್ಸ್ ಗೆ ಸೇವೆ ಮಾಡುತ್ತಾರೆ. ಇದು ಮೋದಿಗೂ ಅನ್ವಯಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದ ಪಕ್ಷ. ಬಿಜೆಪಿ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ. ಅವರ ವಂಶಸ್ಥರು ಹಿಂದೆ ಈ ದೇಶನೂ ಕಟ್ಟಿಲ್ಲ. ಇವರು ಬುರುಡೆ ಬಿಟ್ಟು ಅಧಿಕಾರಕ್ಕೆ ಬಂದಿರುವುದು. ಪ್ರಧಾನಿ ಮೋದಿ ಉತ್ತರಕುಮಾರ ಇದ್ದಹಾಗೆ. ಅವರು 5 ವರ್ಷದಲ್ಲಿ ಒಂದು ಪ್ರೆಸ್ಮಿಟ್ ಕೂಡ ಮಾಡಿಲ್ಲ. 5 ವರ್ಷದಲ್ಲಿ 19 ದಿನ ಮಾತ್ರ ಪಾರ್ಲಿಮೆಂಟ್ಗೆ ಹೋಗಿದ್ದಾರೆ. ಮೋದಿ, ಅಮಿತ್ ಶಾ ಇದ್ದರೆ ದೇಶಕ್ಕೆ ಮಾರಕ. ದೇಶದಲ್ಲಿ ನಿರುದ್ಯೋಗಿಗಳು ತುಂಬಾ ಜನ ಇದ್ದಾರೆ. ಅವರು ಹೇಳಿದ ವಿಷಯವನ್ನು ಇದುವರೆಗೂ ಪೂರ್ತಿ ಮಾಡಿಲ್ಲ. ಆ ಸಮಯಕ್ಕೆ ಜನರ ಮನಸ್ಸನ್ನು ಕೆರಳಿಸಿ ಮತ ತೆಗೆದುಕೊಳ್ಳಲು ಮಾತ್ರ ಇವರು ಸೀಮಿತ. ಇವರಿಂದ ದೇಶಕ್ಕೆ ಏನೂ ಪ್ರಯೋಜನ ಆಗಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ಕನಕಪುರ ಬಂಡೆ ಛಿದ್ರವಾಗಲಿದೆ ಎಂದಿದ್ದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಅವರ ಹೇಳಿಕೆಗೆ, ಕನಕಪುರ ಬಂಡೆ ಛಿದ್ರವಾದಾಗ ಯಾರೆಲ್ಲಾ ಸಿಡಿದು ಹೋಗಲಿದ್ದಾರೆ ಎಂದು ನೀವೇ ನೋಡಿ ಎಂದು ಡಿಕೆ ಸುರೇಶ್ ತಿರುಗೇಟು ನೀಡಿದರು. ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಿ ಬಿಜೆಪಿ ಚುನಾವಣೆಗಾಗಿ ಹಣ ಸಂಗ್ರಹ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.