ಮಂಗಳೂರು: ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್ಎಸ್ಎಸ್ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರದ ಆವರಣದಲ್ಲಿ ನಡೆದ ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡುತ್ತೇನೆ. ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ. ಮೊದಲು ಬ್ರಿಟಿಷರ ಧ್ವಜ ಇತ್ತು. ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು, ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್ನಲ್ಲಿ ಮೂರನೆಯವರ ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ, ಹೀಗೆಯೇ ಮುಂದುವರೆದರೆ ಹಿಂದೂ ಸಮಾಜ ಒಟ್ಟಾಗುತ್ತದೆ ಎಂದಿದ್ದಾರೆ.
ಇವತ್ತು ಕಾಶ್ಮೀರ್ ಫೈಲ್ಸ್ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ, ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಷಂಡ ಕಾಂಗ್ರೆಸ್ ಒಪ್ಪಿಕೊಂಡಿತ್ತು. ಇವತ್ತು ಅದೇ ರೀತಿ ಹಿಜಬ್ ಬಂದಿದೆ. ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಎನ್ನೋ ಮನೋಭಾವ ಇದೆ. ಇದು ಈ ದೇಶವನ್ನು ತುಂಡು ಮಾಡುವ ಪ್ರಯತ್ನ ಎಂದು ಅವರು ಕಿಡಿಕಾರಿದರು.
ಬೈಬಲ್, ಕುರಾನ್ ನಿಮ್ಮ ಮನೆಯಲ್ಲಿರಲಿ. ಭಗವದ್ಗೀತೆ ಇಡೀ ಶಾಲೆಗಳಲ್ಲಿ, ಮನೆ ಮನೆಗಳಲ್ಲಿ ನೀಡಬೇಕು. ಭಗವದ್ಗೀತೆ ಈ ದೇಶದ ಅಂತಃ ಸತ್ವವಾಗಿದೆ. ಜಗತ್ತಿನಲ್ಲಿ ಸರಿಯಾಗಿ ಬದುಕಬೇಕು ಎಂದಿದ್ದರೆ ಅದಕ್ಕೆ ಭಗವದ್ಗೀತೆ ಓದಬೇಕು. ಗುಜರಾತ್ನಂತೆ ನಮ್ಮ ರಾಜ್ಯ ಸರ್ಕಾರವು ಭಗವದ್ಗೀತೆ ಕಲಿಸುವ ಧೈರ್ಯ ಮಾಡಿದೆ. ಇದನ್ನು ಜಾರಿಗೊಳಿಸುವುದಕ್ಕೆ ನಮ್ಮೆಲ್ಲರ ಬೆಂಬಲ ಇದೆ ಎಂದಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್
ಕುರಾನ್, ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರದಲ್ಲಿ ಇದೆಲ್ಲವನ್ನು ಚಿತ್ರಿಸಲಾಗಿದೆ. ಅಮಾಯಕರ ಕೊಲೆ, ಅತ್ಯಾಚಾರ ಮಾಡುವುದಕ್ಕೆ ಕುರಾನ್, ಬೈಬಲ್ ಹೇಳಿಕೊಟ್ಟಿದೆಯಾ..? ಬೈಬಲ್, ಕುರಾನ್ನಲ್ಲಿ ಆ ರೀತಿ ಇದ್ರೆ ಇವಾಗ ಬದಲು ಮಾಡಿಕೊಳ್ಳಬೇಕು. ಮನುಸ್ಮೃತಿಯ ಬಗ್ಗೆ ಭಾರಿ ಮಾತನಾಡುತ್ತಾರೆ. ಅದರಲ್ಲಿ ತಪ್ಪು ಕಂಡು ಬಂದರೆ ಅದಕ್ಕೊಂದು ಭಾಷ್ಯ ಬರೆಯಿರಿ. ನಮ್ಮಲ್ಲಿ ಆ ಸ್ವಾತಂತ್ರ್ಯ ಇದೆ. ನೀವು ಆ ಸ್ವಾತಂತ್ರ್ಯಗಳಿಸಿಕೊಡಬೇಕು. ಕಾಲಕ್ಕೆ ಸರಿಯಾಗಿ ನಮಸ್ಕಾರ ಮಾಡಿಕೊಳ್ಳಬೇಕು. ಹಳೆ ಕಾಲದ ಹಿಜಬ್ ಕಡೆಗೆ ಹೋಗುವುದು ಬೇಡ ಕಿತಾಬ್ ಕಡೆಗೆ ಹೋಗಿ. ಎಲ್ಲರೂ ಒಂದಾಗಿ ಓದುವ ದೃಷ್ಟಿಕೋನ ಬೆಳೆಸಬೇಕು ಎಂದಿದ್ದಾರೆ. ಇದನ್ನೂ ಓದಿ: ಉಪ್ಪಿ ಕಂಠಸಿರಿಯಲ್ಲಿ ‘ಹುಷಾರ್’ ಹಾಡು