ಉಡುಪಿ: ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗೆ ಈ ಬಾರಿ ಚುನಾವಣೆಯಲ್ಲಿ ಸೆಡ್ಡು ಹೊಡೆಯಲು ಆರ್ಎಸ್ಎಸ್ ಪ್ಲಾನ್ ಮಾಡಿದೆ.
ಪ್ರಮೋದ್ ಮಧ್ವರಾಜ್ ಅವರನ್ನು ಹೇಗಾದ್ರೂ ಮಾಡಿ ಕಟ್ಟಿ ಹಾಕಲು ಆರ್ಎಸ್ಎಸ್ ಸೈಲೆಂಟಾಗಿ ಸ್ಕೆಚ್ ಹಾಕಿದ್ದು, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯನ್ನು ಇಳಿಸಲು ಮಾಸ್ಟರ್ ಪ್ಲಾನ್ ಮಾಡಿದೆ ಅಂತ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಗೆ ಬಿಜೆಪಿ ಟಿಕೆಟ್ ಕೊಡಲು ನಿರ್ಧರಿಸಿದೆ. ಮೊಗವೀರ ಸಮುದಾಯದ ನಯನ ಗಣೇಶ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಆರ್ಎಸ್ಎಸ್ ಗೇಮ್ ಪ್ಲಾನ್ ಮಾಡಿದೆ. ಬಿಜೆಪಿ ಹೈಕಮಾಂಡ್ ಗೆ ನಯನ ಗಣೇಶ್ ಅವರ ಹೆಸರನ್ನು ಆರ್ಎಸ್ಎಸ್ ಸೂಚಿಸಿದೆ. ಈ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರ ಸೆಳೆಯಲು ಯತ್ನ ಮಾಡಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಮೊಗವೀರ ಮಹಿಳೆಗೆ ಸೀಟ್ ಕೊಟ್ಟರೆ ಕಾಪು, ಕುಂದಾಪುರ, ಬೈಂದೂರು ಕ್ಷೇತ್ರದ ಮೊಗವೀರ ಮತಕ್ಕೂ ಬಲೆ ಬೀಸಲು ಸುಲಭವಾಗುತ್ತದೆ ಎಂಬುದು ಬಿಜೆಪಿಯ ಪ್ಲಾನ್. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಈಗಾಗಲೇ ಐದಾರು ಹೆಸರು ಸಾಲಿನಲ್ಲಿದೆ. ಇದೀಗ ಮೊದಲ ಬಾರಿಗೆ ನಯನ ಗಣೇಶ್ ಹೆಸರು ಕೇಳಿ ಬಂದಿದೆ. ಕಳಂಕ ರಹಿತರನ್ನು ಇಳಿಸಿದ್ರೆ ಸುಲಭವಾಗಿ ಪ್ರಚಾರಕ್ಕೆ ಹೋಗಬಹುದು. ಎದುರಾಳಿಗೆ ದಾಳಿ ಮಾಡಲು ವಿಷಯಗಳೇ ಇರಬಾರದು ಎಂಬುದು ಬಿಜೆಪಿಯ ವಾದ. ತಳಮಟ್ಟದಲ್ಲಿ ನಾವು ಕ್ಯಾಂಪೇನ್ ಮಾಡುತ್ತೇವೆ ಎಂದು ಆರ್ಎಸ್ಎಸ್ ಭರವಸೆ ಕೊಟ್ಟಿದೆ ಎಂಬ ಮಾಹಿತಿಯಿದೆ.