ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(ಆರ್ಎಸ್ಎಸ್) ನಿಷೇಧಿಸಬೇಕು ಎಂದು ಸಿಖ್ ಉನ್ನತ ಸಂಸ್ಥೆ ಅಕಾಲ್ ತಖ್ತ್ ಮುಖ್ಯಸ್ಥ ಗಿಯಾನಿ ಹಪ್ರ್ರೀತ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಅಮೃತಸರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದರಿಂದ ರಾಷ್ಟ್ರವನ್ನು ವಿಭಜಿಸುತ್ತದೆ. ಅಲ್ಲದೆ ಆರ್ಎಸ್ಎಸ್ ಕೇಂದ್ರ ಸರ್ಕಾರವನ್ನು ಆಳುವ ಸೈದ್ಧಾಂತಿಕ ಮಾರ್ಗದರ್ಶಕವಾಗಿದೆ. ಆರ್ಎಸ್ಎಸ್ ದೇಶದಲ್ಲಿ ವಿಭಜನೆಯುಂಟುಮಾಡುತ್ತಿದೆ. ಅದರ ನಾಯಕರ ಹೇಳಿಕೆಗಳು ಸಹ ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್ಎಸ್ಎಸ್ಗೆ ಬಿಜೆಪಿಯೊಂದಿಗೆ ಸಂಬಂಧವಿರುವ ಕುರಿತು ಪ್ರಸ್ತಾಪವಾದಾಗ ಗಿಯಾನಿ ಈ ಕುರಿತು ಮಾತನಾಡಿದ್ದು, ಆರ್ಎಸ್ಎಸ್ ದೇಶದ ಹಿತಾಸಕ್ತಿಗಾಗಿ ಇಲ್ಲ. ಬದಲಿಗೆ ದೇಶಕ್ಕೆ ನೋವುಂಟು ಮಾಡುತ್ತಿದ್ದು, ದೇಶವನ್ನು ನಾಶ ಮಾಡುತ್ತಿದೆ ಎಂದು ಹರಿಹಾಯ್ದರು.
ಅಕಾಲ್ ತಖ್ತ್ ಸಿಖ್ ಸಮುದಾಯದ ಅತ್ಯುನ್ನತ ಸ್ಥಾನವಾಗಿದೆ. ಅಮೃತಸರದಲ್ಲಿರುವ ಈ ಅಕಾಲ್ ತಖ್ತ್, ಸುವರ್ಣ ಮಂದಿರ ಕೇಂದ್ರಿತ ಧಾರ್ಮಿಕ ಕಟ್ಟಡಗಳ ಸಂಕೀರ್ಣವಾಗಿದೆ. ಸಿಖ್ ಸಮುದಾಯದವರು ಆರ್ಎಸ್ಎಸ್ ಸೈದ್ಧಾಂತಿಕತೆ ಕುರಿತು ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ(ಎಸ್ಜಿಪಿಸಿ) ಅಧ್ಯಕ್ಷ ಗೋಬಿಂದ್ ಸಿಂಗ್ ಲಾಂಗೋವಾಲ್ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆದಿದ್ದನ್ನು ಆಕ್ಷೇಪಿಸಿದ್ದರು.
ದಸರಾ ಸಂದರ್ಭದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಏಕೆಂದರೆ ಭಾರತ ಹಿಂದೂ ರಾಷ್ಟ್ರವಾಗಿದೆ ಎಂದು ಹೇಳಿದ್ದರು. ಇದಕ್ಕೆ ಎಸ್ಜಿಪಿಸಿ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ಎಸ್ಜಿಪಿಸಿಯನ್ನು ಸಿಖ್ ಸಮುದಾಯದ ಸಂಸತ್ತು ಎಂದೇ ಕರೆಯಲಾಗುತ್ತದೆ. ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ಗುರುದ್ವಾರಗಳು ಹಾಗೂ ಧಾರ್ಮಿಕ ವಿಷಯಗಳನ್ನು ನಿರ್ವಹಿಸುತ್ತದೆ. ಇದರ ಪದಾಧಿಕಾರಿಗಳನ್ನು ಸಿಖ್ ಸಮುದಾಯದವರು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡುತ್ತಾರೆ.