ಬೆಂಗಳೂರು/ಬಳ್ಳಾರಿ: ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಾಜ್ಯದ ಹಲವು ಕಡೆ ದಾಖಲೆ ಇಲ್ಲದ ಹಣ ಪತ್ತೆಯಾಗುತ್ತಲೇ ಇದೆ. ಈಗ ಬರೋಬ್ಬರಿ 53.58 ಲಕ್ಷ ರೂ. ನಗದು ಹಣ ಮತ್ತು ಸುಮಾರು 200ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.
ಬಸ್ಸಿನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 52 ಲಕ್ಷ ರೂಪಾಯಿ ನಗದನ್ನು ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಜಪ್ತಿ ಮಾಡಿದ್ದಾರೆ. ತಮಿಳುನಾಡು ಮೂಲದ ಕೆಪಿಎನ್ ಟ್ರಾವೆಲ್ಸ್ ಬಸ್ಸಿನಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಹಣ ಸಾಗಿಸಲಾಗುತಿತ್ತು.
ದೇವನಹಳ್ಳಿ ಬಳಿಯ ರಾಣಿ ಸರ್ಕಲ್ನಲ್ಲಿ ದಾಳಿ ನಡೆಸಿದ ಜಿಲ್ಲಾಧಿಕಾರಿ ತಂಡ ಹಣವನ್ನು ವಶಕ್ಕೆ ಪಡೆದು ಚಾಲಕನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಮಹಾಜನದನ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಬಂಗಾರದ ಆಭರಣ ಮತ್ತು ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಬಸ್ ನಲ್ಲಿ ಮಂಜುನಾಥ್ ದಾಖಲೆ ಇಲ್ಲದ ಬಂಗಾರದ ಆಭರಣ ಮತ್ತು ನಗದನ್ನು ಸಾಗಿಸುತ್ತಿದ್ದನು.
ತಪಾಸಣೆ ವೇಳೆ 1 ಲಕ್ಷ 50 ಸಾವಿರ ನಗದು, ಅಂದಾಜು 250 ರಿಂದ 300 ಗ್ರಾಂ ಬಂಗಾರದ ಆಭರಣಗಳನ್ನು ಗಂಗಾವತಿಯಿಂದ ಶಿಕಾರಿಪುರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ತಪಾಸಣೆ ವೇಳೆ ಕಿವಿ ಒಲೆ, ಮುತ್ತು, 42 ತಾಳಿ ಪೀಸು, 34 ಮಾಟಿಲ್, 49 ಮೂಗತಿ, 42 ಬಟನ್ ಸೇರಿದಂತೆ ಅಂದಾಜು 15 ಲಕ್ಷ ಮೌಲ್ಯದ ಆಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.