ಚಿಕ್ಕಬಳ್ಳಾಪುರ: ರೇಷ್ಮೆ ಸೀರೆ ಅಂಗಡಿಗೆ ಸುರಂಗ ಕೊರೆದ ಖದೀಮರು, 5 ಲಕ್ಷ ರೂ. ಮೌಲ್ಯದ ರೇಷ್ಮೆ ಸೀರೆಗಳನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಬಿಬಿ ರಸ್ತೆಯ ಸೌಮ್ಯ ಸಿಲ್ಕ್ ಸ್ಯಾರಿ ಹೌಸ್ನಲ್ಲಿ ಈ ಘಟನೆ ನಡೆದಿದೆ. ಈ ಅಂಗಡಿಯ ಹಿಂಭಾಗದಲ್ಲಿ ಖಾಲಿ ಜಾಗವಿದ್ದು, ಅಲ್ಲಿ ಗಿಡಗಂಟೆಗಳು ಬೆಳೆದಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಹಿಂಬದಿಯ ಗೋಡೆಗೆ ಕಿಂಡಿ ಕೊರೆಯಲು ಪ್ರಯತ್ನಿಸಿ ವಿಫಲರಾಗಿದ್ದರು.
ಈ ಪ್ರಯತ್ನ ನಿಲ್ಲಿಸದೇ ಕಟ್ಟಡದ ಪಾಯಕಲ್ಲುಗಳನ್ನು ಅಗೆದು, ಸುರಂಗ ತೆಗೆದಿದ್ದಾರೆ. ಸುರಂಗದ ಮೂಲಕ ಅಂಗಡಿಯೊಳಗೆ ನುಸುಳಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಎಲ್ಲಾ ಬೀರುಗಳನ್ನು ಜಾಲಾಡಿ, ಸರಿ ಸುಮಾರು 5 ಲಕ್ಷ ಮೌಲ್ಯದ ರೇಷ್ಮೆ ಸೀರೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ಎಂದಿನಂತೆ ಮಾಲೀಕ ವೆಂಕಟೇಶ್ ಇಂದು ಅಂಗಡಿಯನ್ನು ತೆರೆದಿದ್ದಾರೆ. ಈ ವೇಳೆ ಹಾಸಿಗೆ ಮೇಲೆ ಮಣ್ಣು ಬಿದ್ದಿರುವುದು ಕಂಡ ವೆಂಕಟೇಶ್ ಅವರು, ಏನಾಗಿದೆ ಅಂತ ನೋಡುವಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ನಗರ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಅವರು, ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv