ಬೆಂಗಳೂರು: ಮೇಯರ್, ಉಪ ಮೇಯರ್, ಕಮೀಷನರ್ಗೆ ಬಂಗಲೆ ನಿರ್ಮಾಣಕ್ಕಾಗಿ ಬಿಬಿಎಂಪಿ ಬಜೆಟ್ನಲ್ಲಿ 5 ಕೋಟಿ ರೂ. ತೆಗೆದಿಡಲಾಗಿದೆ ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಂಗಲೆ ಬೇಡಿಕೆ ಇಟ್ಟಿರುವುದು ಸತ್ಯ. 5 ವರ್ಷದ ಹಿಂದೆಯೇ ಗಾಂಧಿನಗರದಲ್ಲಿ ಮೇಯರ್ ಬಂಗಲೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಹೀಗಾಗಿ ಈ ಬಾರಿಯ ಬಿಬಿಎಂಪಿ ಬಜೆಟ್ನಲ್ಲಿ 6 ಕೋಟಿ ರೂ. ತಗೆದಿಟ್ಟು, ನಿರ್ಮಾಣಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು, ಅನುಮತಿ ಸಿಕ್ಕರೆ ಬಂಗಲೆ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಸ್ಪಷ್ಟನೆ ನೀಡಿದರು.
ದುಬೈ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಮೇಯರ್ಗೆ ಬಂಗಲೆ ಇದೆ. ಯಾವುದಾದರು ನಿಯೋಗಗಳು ಭೇಟಿ ನೀಡಿದರೆ ಅಲ್ಲಿ ಚರ್ಚೆ ಮಾಡಲು, ಇನ್ನಿತರ ವಿಚಾರಕ್ಕೆ ಬಂಗಲೆ ನಿರ್ಮಾಣಕ್ಕೆ ಎಲ್ಲಾ ಸದಸ್ಯರು ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲದೆ ಆಯುಕ್ತರು ಬೇರೆ ಬೇರೆ ಭಾಗದಿಂದ ಬರುತ್ತಾರೆ. ಅವರಿಗೂ ಅನುಕೂಲವಾಗುವ ರೀತಿಯಲ್ಲಿ ಬಂಗಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಎರಡು ಅವಧಿಯ ಮೇಯರ್ ಗಳಿಗೆ ಬಂಗಲೆ ಅವಕಾಶ ಸಿಗುವುದಿಲ್ಲ. ಒಂದೇ ವರ್ಷ ಮೇಯರ್ ಅಧಿಕಾರ ಇದ್ದರೂ ಗೌರವ ಸೂಚಕವಾಗಿ ಬಂಗಲೆ ಇರಬೇಕಾಗುತ್ತದೆ. ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಬಂಗಲೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews