ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ 2 ಕೋಟಿ ದರೋಡೆ ಮಾಡಿರುವ ಘಟನೆ ನಡೆದಿದೆ. ಡಾಲರ್ ಎಕ್ಸ್ಚೇಂಜ್ಗೆ ಅಂತಾ ಎರಡು ಕೋಟಿ ಹಿಡಿದು ಬಂದವನ ಕುತ್ತಿಗೆಯ ಮೇಲೆ ಚಾಕು ಇಟ್ಟು ರಾಬಲಿ ಮಾಡಲಾಗಿದೆ.
ಎಂಜಿನಿಯರ್ ಒಬ್ಬ ಜರ್ಮನಿಯಿಂದ ಮೆಷಿನ್ ತರಿಸಿಕೊಳ್ಳುವುದಕ್ಕೆಂದು ರೂಪಾಯಿಯನ್ನ ಡಾಲರ್ಗೆ ಎಕ್ಸ್ಚೇಂಜ್ ಮಾಡಿಸಲು ಬಂದಿದ್ದರು. ಈ ವೇಳೆ 2 ಕೋಟಿ ಎಗರಿಸಿ ಪರಾರಿಯಾಗಿರೋ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಎಂಎಸ್ ಪಾಳ್ಯದ ಎಕೆ ಎಂಟರ್ ಪ್ರೈಸಸ್ನಲ್ಲಿ ನಡೆದಿದೆ. ಇದನ್ನೂ ಓದಿ: ಗ್ವಾಲಿಯರ್-ಬೆಂಗಳೂರು ಹೊಸ ರೈಲಿಗೆ ಚಾಲನೆ
ಕೆಂಗೇರಿಯ ಶ್ರೀಹರ್ಷ, ಕೋಲ್ಡ್ ಪ್ರೆಸ್ಸಡ್ ಆಯಿಲ್ ಉದ್ಯಮವನ್ನು ಆರಂಭಿಸುವ ಸಲುವಾಗಿ ಸ್ನೇಹಿತರ ಬಳಿ 2 ಕೋಟಿ ಹಣ ಹೊಂದಿಸಿಕೊಂಡು ಜರ್ಮನಿಯಿಂದ ಮೆಷಿನ್ ತರಿಸಲು ಯೋಜಿಸಿದ್ದರು. 2 ಕೋಟಿ ಹಣವನ್ನ USDT ಕರೆನ್ಸಿಗೆ ಪರಿವರ್ತಿಸಬೇಕಿತ್ತು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗುತ್ತೆ. ಬೆಂಜಮಿನ್ 2 ಕೋಟಿ ಹಣವನ್ನು ತೆಗೆದುಕೊಂಡು ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್ ಬಳಿ ಬರುವಂತೆ ಹೇಳಿದ್ದಾರೆ.
ಶ್ರೀಹರ್ಷ (ಜೂ.25) ಮತ್ತು ಸ್ನೇಹಿತರಾದ ನಾಗೇಂದ್ರ, ಶಾಂತಕುಮಾರ್ ಜೊತೆ ಹಣ ತೆಗೆದುಕೊಂಡು ಹೋಗಿದ್ದಾರೆ. 2 ಕೋಟಿ ನಗದು ಹಣವನ್ನು ಸ್ನೇಹಿತ ಶಾಂತಕುಮಾರ್ ಅವರ ಸ್ವಿಫ್ಟ್ ಕಾರಿನಲ್ಲಿ ತೆಗೆದುಕೊಂಡು ಎಂಎಸ್ ಪಾಳ್ಯ ಸರ್ಕಲ್ ಬಳಿ ಇರುವ ಎಕೆ ಎಂಟರ್ಪ್ರೈಸಸ್ ಎಂಬ ಮಳಿಗೆಗೆ ಹೋಗ್ತಾರೆ. 2 ಕೋಟಿ ಹಣವನ್ನು ಬೆಂಜಮಿನ್ ಮತ್ತು ಅವರ ಜೊತೆಯಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳು ನಗದು ಹಣವನ್ನು ಎಣಿಕೆ ಮಾಡುವಾಗ ಏಕಾಏಕಿ 6 ರಿಂದ 7 ಜನರ ಗುಂಪೊಂದು ಒಳಗೆ ನುಗ್ಗಿದೆ. ಚಾಕು ತೋರಿಸಿ 2 ಕೋಟಿ ನಗದು ಹಣ ಮತ್ತು ನಾಲ್ಕು ಮೊಬೈಲ್ಗಳನ್ನ ಕಿತ್ತು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಆನೆಗಳು – ಬೆಚ್ಚಿಬಿದ್ದ ಭಕ್ತರು
ಎಕೆ ಎಂಟರ್ ಪ್ರೈಸಸ್ ಕಚೇರಿಯಿಂದ ಹೊರ ಬರ್ತಿದ್ದಂತೆ ಬೆಂಜಮಿನ್ ಹಾಗೂ ಆತನ ಸ್ನೇಹಿತರು ಸಹ ಓಡಿ ಹೋಗಿದ್ದಾರೆ. ಅನುಮಾನಗೊಂಡ ಹರ್ಷ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ಆರಂಭಿಸಿದ ಪೊಲೀಸರು ಬೆಂಜಮಿನ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಡ್ರಿಲ್ ಮಾಡುತ್ತಿದ್ದಾರೆ. ಪೊಲೀಸರಿಗೆ ಮೇಲ್ನೋಟಕ್ಕೆ ಹರ್ಷ ತನ್ನ ಗ್ಯಾಂಗ್ ಜೊತೆ ಸೇರಿ 2 ಕೋಟಿ ಹಣ ಲಪಟಾಯಿಸುವ ಉದ್ದೇಶದಿಂದ ಪ್ಲ್ಯಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹರ್ಷನಿಗೆ ಹಣ ಕಲೆಕ್ಟ್ ಆದ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು, ಹಣ ತೆಗೆದುಕೊಂಡು ಪರಾರಿಯಾಗಿರುವ ಗ್ಯಾಂಗ್ನ ಹುಡುಕಾಟ ನಡೆಸುವ ಕೆಲಸವನ್ನ ವಿದ್ಯಾರಣ್ಯಪುರ ಪೊಲೀಸರು ಮಾಡುತ್ತಿದ್ದಾರೆ.