ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ರಾಜ್ಯದ ಚಿತ್ರದುರ್ಗ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 6.58 ಲಕ್ಷ ರೂ. ಹಣ ಹಾಗೂ 2.45 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ನಗರದ ಚೆಕ್ ಪೋಸ್ಟ್ ಬಳಿ ಸರ್ಕಾರಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 3.80 ಲಕ್ಷ ರೂ. ಮೌಲ್ಯದ ಬೆಳ್ಳಿ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಮೂಲದ ಹರೀಶ, ವಿಕ್ರಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಪರಿಶೀಲನೆ ನಡೆಸಿದ ವೇಳೆ ಬೆಳ್ಳಿವಸ್ತುಗಳು ಪತ್ತೆಯಾಗಿದೆ. ಈ ವೇಳೆ ಬಂಧಿತರು ತಾವು ವ್ಯಾಪಾರಿಗಳು ಎಂಬ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿಯ ಕುಮಾರನಹಳ್ಳಿ ತಾಂಡಾ ಚೆಕ್ ಪೋಸ್ಟ್ ಬಳಿ ಹಡಗಲಿಯಿಂದ ಹರಪನಹಳ್ಳಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.78 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿ ಮೂಲದ ನಯನಕುಮಾರ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಸಾರಿಗೆ ಬಸ್ಸಿನಲ್ಲಿ ಹಣ ಸಾಗಾಟ ನಡೆಸುತ್ತಿದ್ದು, ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಡಬಗಸ್ತಿ ಗ್ರಾಮದ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ನೇತೃತ್ವದಲ್ಲಿ ದಾಳಿ ನಡೆಸಿ ಗೋವಾ ಮೂಲದ ಚಿನ್ನದ ವ್ಯಾಪಾರಿಗೆ ಸೇರಿದೆ ಎನ್ನಲಾದ 2.55 ಕೋಟಿ ರೂ. ಮೌಲ್ಯದ 7 ಕೆಜಿ 722 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಡಿಸಿಎಫ್ ಮಹೇಶ ಕುಮಾರ ಅವರೊಂದಿಗೆ ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಅಥಣಿ ನಾಕಾ ಬಳಿ ಕಾರಿನಲ್ಲಿ ಸಾಗಾಟ ನಡೆಸುತ್ತಿದ್ದ 4.80 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.