ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹೇಗೆ ದುಡ್ಡು ಮಾಡೋದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಾದ್ರೆ ಆರೋಗ್ಯ ಇಲಾಖೆ ಎಂಜಿನಿಯರ್ ಗಳನ್ನ ನೋಡಬೇಕು. ಆರೋಗ್ಯ ಕೇಂದ್ರದ ಹೆಸರಲ್ಲಿ ಕೋಟಿ ಕೋಟಿ ಹಣ ನುಂಗಿ ನೀರು ಕುಡಿದಿದ್ದಾರೆ.
ನಮ್ಮ ಆರೋಗ್ಯ ಇಲಾಖೆಯ ಎಂಜಿನಿಯರ್ ಗಳು ಎಷ್ಟು ಬುದ್ದಿವಂತರು ಅನ್ನೋದಕ್ಕೆ ಈ ಸ್ಟೋರಿ ನೋಡಲೇಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಯಲ್ಲಿ ಕೋಟಿ ಕೋಟಿ ಹಣ ಮಾಡಿ ದುಡ್ಡು ಮಾಡೋರಿಗೆ ಮಾದರಿಯಾಗಿದ್ದಾರೆ. ಪ್ರತಿ ತಾಲೂಕಿನಲ್ಲಿ ನಿರ್ಮಾಣವಾಗಿರೋ ಆರೋಗ್ಯ ಕೇಂದ್ರದಲ್ಲೂ ಎಂಜಿನಿಯರ್ ಗಳು ದುಡ್ಡು ಮಾಡೋ ಅಂಶ ಆರ್ ಟಿಐನಲ್ಲಿ ಬಯಲಾಗಿದೆ. ಸ್ವತಃ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ಕೇಂದ್ರ ಬೇಡ ಅಂತ ಪತ್ರ ಬರೆದಿದ್ದರು 1.20 ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ ಕಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ವಡ್ನಾಳ್ ಗ್ರಾಮದಲ್ಲಿ ಈ ರೀತಿಯ ಬಹು ದೊಡ್ಡ ಹಗರಣ ನಡೆದಿದೆ.
ಇದು ಕೇವಲ ದಾವಣಗೆರೆ ಕಥೆ ಮಾತ್ರವಲ್ಲ. ಪ್ರತೀ ಜಿಲ್ಲೆಯಲ್ಲಿ 2-3 ಆರೋಗ್ಯ ಕೇಂದ್ರಗಳನ್ನ ಅನಾವಶ್ಯಕವಾಗಿ ಕಟ್ಟಿದ್ದಾರಂತೆ. 2017-18 ನೇ ಸಾಲಿನಲ್ಲಿ ನಿರ್ಮಾಣವಾಗಿರೋ 100-200 ಕೇಂದ್ರಗಳಲ್ಲಿ 50ಕ್ಕೂ ಹೆಚ್ಚು ಕೇಂದ್ರಗಳು ಬೋಗಸ್ ಆಗಿವೆಯಂತೆ. ಇದರಲ್ಲಿ ಸುಮಾರು 150 ಕೋಟಿ ಹಗರಣ ನಡೆದಿರುವ ಶಂಕೆ ಮೂಡಿದೆ. ಇನ್ನು ಆಶ್ಚರ್ಯ ಸಂಗತಿ ಅಂದ್ರೆ ಚುನಾವಣೆ ಸಮಯದಲ್ಲಿ ನೀತಿ ಸಂಹಿಂತೆ ಇದ್ದರು ಹಣ ಬಿಡುಗಡೆಯಾಗಿದೆ. ಅಲ್ಲದೆ 1.20 ಕೋಟಿಗೆ ಪ್ರಾರಂಭವಾಗುವ ಕಾಮಗಾರಿ ಮುಗಿಯೋಕೆ 1.60 ಕೋಟಿ ದಾಟುತ್ತಂತೆ. ವಿಚಿತ್ರ ಅಂದ್ರೆ ಕಾಮಗಾರಿ ಮುಗಿಯದೇ ಇದ್ರು ಟೆಂಡರ್ದಾರನಿಗೆ ಹಣ ಬಿಡುಗಡೆಯಾಗಿದೆಯಂತೆ.
ಜನರಿಗೆ ಅನುಕೂಲವಾಗಲಿ ಅಂತ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿತ್ತು. ಆದರೆ ಅವಶ್ಯಕತೆಯೇ ಇಲ್ಲದೆ ಇರೋ ಕಡೆ ಆರೋಗ್ಯ ಕೇಂದ್ರ ಸ್ಥಾಪಿಸಿ ಇದರಲ್ಲೂ ಹಣ ಮಾಡಿದ್ದಾರೆ. ಇದು ಕೇವಲ ಒಂದು ಜಿಲ್ಲೆಯ ಸ್ಯಾಂಪಲ್. ಇಡೀ ರಾಜ್ಯದಲ್ಲಿ ಇಂತಹ ಎಷ್ಟು ಕೇಂದ್ರಗಳು ಸ್ಥಾಪನೆ ಆಗಿರಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವರು ಏನ್ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv