ಹೈದರಾಬಾದ್: ಇತ್ತೀಚೆಗೆ ಭಿಕ್ಷುಕರು ಸಾಕಷ್ಟು ಹಣ ಸಂಪಾದಿಸಿರುವ ಅನೇಕ ಸುದ್ದಿಗಳನ್ನು ಓದಿದ್ದೇವೆ. ಅದೇ ರೀತಿ ಇದೀಗ ಪಾಂಡಿಚೇರಿಯ ದೇವಾಲಯವೊಂದರ ಹೊರಗಡೆ ಭಿಕ್ಷೆ ಬೇಡುತ್ತಿರುವ ವೃದ್ಧೆಯ ಕೈಯಲ್ಲಿ 12 ಸಾವಿರ ರೂ. ಹಾಗೂ ಆಕೆಯ ಬ್ಯಾಂಕ್ ಅಕೌಂಟಿನಲ್ಲಿ ಸುಮಾರು 2 ಲಕ್ಷ ಹಣ ಇರುವುದು ಗುರುವಾರ ಬೆಳಕಿಗೆ ಬಂದಿದೆ.
ವೃದ್ಧೆಯನ್ನು ಪಾರ್ವತಮ್ಮ(70) ಎಂದು ಗುರುತಿಸಲಾಗಿದೆ. ಪ್ರತಿ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಬಳಿ ಭಿಕ್ಷೆ ಬೇಡಿ ಈ ಹಣ ಸಂಪಾದಿಸಿರುವುದಾಗಿ ವೃದ್ಧೆ ತಿಳಿಸಿದ್ದಾರೆ. ಇವರು ಆಧಾರ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಕೂಡ ಹೊಂದಿದ್ದಾರೆ.
ಪಾರ್ವತಮ್ಮ ದೇವಸ್ಥಾನದ ಹೊರಗಡೆ ಭಕ್ತರ ಬಳಿ ದಯವಿಟ್ಟು ಹಣ ನೀಡಿ, ಸಹಾಯ ಮಾಡಿ ಎಂದು ಬೇಡುತ್ತಿರುವುದನ್ನು ಪೊಲೀಸರು ಕೂಡ ಗಮನಿಸಿದ್ದಾರೆ. ಇದನ್ನೂ ಓದಿ: 10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ
ವೃದ್ಧೆ ಬಳಿ ಬ್ಯಾಂಕ್ ಅಕೌಂಟ್ ಇದ್ದು, ಅದರಲ್ಲಿ 2 ಲಕ್ಷ ರೂ. ಇದೆ. ಅಲ್ಲದೆ ವೃದ್ಧೆಯ ಕೈಯಲ್ಲಿ ಸರಿ ಸುಮಾರು 12 ಸಾವಿರ ರೂ. ಇತ್ತು. ಇವರು ಮೂಲತಃ ತಮಿಳುನಾಡಿನ ಕಲ್ಲಿಕುರಿಚಿಯವಾಗಿದ್ದಾರೆ. ಇವರ ಪತಿ 40 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಆ ನಂತರ ಈಕೆ ಪಾಂಡಿಚೇರಿಯ ಬೀದಿಯಲ್ಲಿ ತಿರುಗಾಡಲು ಆರಂಭಿಸಿದ್ದಾರೆ ಎಂದು ಎಸ್ ಪಿ ಮರನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪಾರ್ವತಮ್ಮ ಅವರು ಕಳೆದ 8 ವರ್ಷಗಳಿಂದ ದೇವಸ್ಥಾನದ ಹೊರಗಡೆ ವಾಸಿಸುತ್ತಿದ್ದಾರೆ. ಅಲ್ಲದೆ ಅಪರಿಚಿತರು ಕೊಟ್ಟ ಆಹಾರದಿಂದಲೇ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಹಣವಿರುವ ಬಗ್ಗೆ ನಮಗೆ ತಿಳಿದಿತ್ತು ಎಂದು ಸ್ಥಳೀಯ ಅಂಗಡಿಯವರು ಹೇಳಿದ್ದಾರೆ.
ಒಟ್ಟಿನಲ್ಲಿ ಇದೀಗ ವೃದ್ಧೆಯನ್ನು ರಕ್ಷಣೆ ಮಾಡಲಾಗಿದ್ದು, ಕಲ್ಲಕುರುಚಿಯ ಗ್ರಾಮದಲ್ಲಿರುವ ಅವರ ಮನೆಯವರಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮೃತಪಟ್ಟ ಭಿಕ್ಷುಕನ ಬ್ಯಾಗಲ್ಲಿ ಸಿಕ್ತು 3 ಲಕ್ಷ ರೂ.