ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಶ್ರೀ ಶಂಕಾಸ್ಪದ ಸಾವು ಹಿನ್ನೆಲೆಯಲ್ಲಿ ಅವರ ಚಿನ್ನ ಕದ್ದವರ್ಯಾರು ಅನ್ನುವ ಸಂಶಯ ಶುರುವಾಗಿದೆ.
ಸ್ವಾಮೀಜಿ ಬಳಿಯಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಸ್ವಾಮೀಜಿ ಬಳಿ ಸುಮಾರು 4 ಕೆ.ಜಿ ಚಿನ್ನಾಭರಣವಿದ್ದು, ಚಿನ್ನದ ಮೇಲೆ ಅವರಿಗೆ ಅತಿಯಾದ ವ್ಯಾಮೋಹವಿತ್ತು. ಶಿರೂರು ಶ್ರೀ 5 ಕಡಗಗಳು, ಚಿನ್ನದ ಮಾಲೆಗಳು, ತುಳಸಿ ಮಾಲೆ ಧರಿಸುತ್ತಿದ್ದರು. ನಾಲ್ಕೈದು ಉಂಗುರಗಳನ್ನು ತೊಡುತ್ತಿದ್ದರು. ಇದೀಗ ಸ್ವಾಮೀಜಿ ಆಸ್ಪತ್ರೆ ಸೇರಿದಾಗ ಬಂಗಾರ ಕಳ್ಳತನವಾಗಿರುವ ಶಂಕೆಯಿದೆ.
ಚಿನ್ನ ಎಗರಿಸಿದ್ದು ರಮ್ಯಾ ಶೆಟ್ಟಿಯಾ ಎನ್ನುವ ಸಂಶಯವಿದೆ. ಯಾಕಂದ್ರೆ ರಮ್ಯಾ ಶ್ರೀಗಳ ಚಿನ್ನದ ಮೇಲೆ ವ್ಯಾಮೋಹಿತಳಾಗಿದ್ದಳು. ಫೋಟೋ ತೆಗೆಸಿಕೊಂಡಿದ್ದಳು. ಮಠದ, ಶ್ರೀಗಳ ಆಪ್ತರ ಮೇಲೂ ಸಂಶಯವಿದೆ. ಶಿರೂರು ಸ್ವಾಮೀಜಿ ನಡೆದುಕೊಂಡು ಹೋಗುವಾಗ ಬಂಗಾರದ ಭಾರಕ್ಕೆ ಅವರು ಕುಸಿದು ಹೋಗುತ್ತಾರಾ ಅನ್ನುವಷ್ಟು ಚಿನ್ನ ಅವರ ಕೊರಳಲ್ಲಿ ಇತ್ತು.
ಮಠದಲ್ಲೇ ಆಭರಣ ಬಿಟ್ಟಿದ್ದ ಸ್ವಾಮೀಜಿ:
ಸಾವಿಗೂ ಕೆಲ ದಿನಗಳ ಹಿಂದೆ ಸ್ವಾಮೀಜಿಯವರು ತನ್ನ ಬಳಿ 3 ಕೆ.ಜಿ ಚಿನ್ನ ಇದೆ ಅಂತ ಮಾಧ್ಯಮಗಳಿಗೆ ತಿಳಿಸಿದ್ದರು. 3 ಕೆ.ಜಿ ಚಿನ್ನವಾದರೆ ಈವಾಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 75 ಲಕ್ಷ ರೂ. ಗೂ ಅಧಿಕವಾಗುತ್ತದೆ. ಸ್ವಾಮೀಜಿ ಅವರು ತಮ್ಮ ಕುತ್ತಿಗೆ ಮತ್ತು ಕೈಗಳಲ್ಲಿ ಸುಮಾರು 1 ಕೆ.ಜಿಯಷ್ಟು ಚಿನ್ನಭಾರಣಗಳನ್ನು ಧರಿಸುತ್ತಿದ್ದರು. ಅಂದ್ರೆ ಸರಿ ಸುಮಾರು 10ರಿಂದ 20 ಲಕ್ಷ ರೂ. ಮೌಲ್ಯದಷ್ಟು ಚಿನ್ನಾಭರಣಗಳನ್ನು ಪ್ರತೀ ದಿನ ತೊಡುತ್ತಿದ್ದರು. ಈ ಆಭರಣಗಳು ಪುರಾತನ ಕಾಲದ್ದಾಗಿದೆ. ಆದ್ದರಿಂದ ಅವುಗಳಿಗೆ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಕೋಟ್ಯಂತರ ಬೆಲೆ ಇದೆ ಅಂತ ಚಿನ್ನಾಭರಣ ತಜ್ಞರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸ್ವಾಮೀಜಿ ಮಣಿಪಾಲದ ಆಸ್ಪತ್ರೆಗೆ ಸೇರುವಾಗ ಅವರ ಮೈಮೇಲೆ ಚಿನ್ನಾಭರಣಗಳು ಇರಲಿಲ್ಲ. ಎಲ್ಲವನ್ನೂ ಮೂಲ ಮಠದಲ್ಲೇ ತೆಗೆದಿಟ್ಟು ಹೋಗಿದ್ದರು. ಆದ್ರೆ ಇದೀಗ ಅವುಗಳು ಏನಾಗಿದೆ? ಯಾರ ಕೈಯಲ್ಲಿವೆ ಅನ್ನೋದೇ ನಿಗೂಢವಾಗಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಮಹಿಳೆ ಲೂಟಿ ಆರೋಪ:
ಸುಮಾರು 2 ವರ್ಷಗಳ ಹಿಂದಿನಿಂದ ಸ್ವಾಮೀಜಿಯವರಿಗೆ ಈ ಚಿನ್ನಾಭರಣಗಳನ್ನು ಧರಿಸಿಕೊಳ್ಳುವ ಖಯಾಲಿ ಆರಂಭವಾಗಿದೆ. ಅಂದ್ರೆ ಅವರ ಆಪ್ತ ಮಹಿಳೆಯೊಬ್ಬರು ಮಠಕ್ಕೆ ಸೇರಿಕೊಂಡ ಬಳಿಕ ಸ್ವಾಮೀಜಿ ಆಭರಣ ಧರಿಸಲು ಆರಂಭಿಸಿದ್ದಾರೆ. ಮೂಲತಃ ಸುಳ್ಯದವಳಾಗಿದ್ದರೂ ಆಕೆ ಮದುವೆಯಾಗಿ ಮುಂಬೈನಲ್ಲಿದ್ದವಳಾಗಿದ್ದಳು. ಹೀಗಾಗಿ ಆಕೆ ಚಿನ್ನದ ವ್ಯಾಪಾರಿಗಳನ್ನು ಮಠಕ್ಕೆ ಕರೆಸುತ್ತಿದ್ದು, ಅವರು 3-4 ತಿಂಗಳಿಗೊಮ್ಮೆ ತಮ್ಮೊಂದಿಗೆ ವೈವಿಧ್ಯಮಯ ಆ್ಯಂಟಿಕ್ ಆಭರಣಗಳನ್ನು ತರುತ್ತಿದ್ದರು. ಈ ವೇಳೆ ಆಕೆ ಆಭರಣಗಳನ್ನು ಆಯ್ಕೆ ಮಾಡುತ್ತಿದ್ದಳು, ಇನ್ನ ಸ್ವಾಮೀಜಿ ಹಣ ನೀಡುತ್ತಿದ್ದರು. ಈ ಆಭರಣಗಳನ್ನು ಆಕೆ ಮತ್ತು ಸ್ವಾಮೀಜಿ ಇಬ್ಬರೂ ಧರಿಸುತ್ತಿದ್ದರು. ಈ ಮೂಲಕ ಆಕೆ ಸ್ವಾಮೀಜಿ ಕೈಯಿಂದ ಲೂಟಿ ಮಾಡುತ್ತಿದ್ದಳು ಅಂತ ಮಠದ ಹಿಂದಿನ ಉಸ್ತುವಾರಿ ಸುನಿಲ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಡಿವಿಆರ್ ಗಾಗಿ ನದಿಯಲ್ಲಿ ಶೋಧ:
ಶಿರೂರು ಮೂಲಮಠದ ಎದುರುಗಡೆ ಸಿಸಿಟಿವಿ ಇತ್ತು. ಸ್ವಾಮೀಜಿ ಅವರ ನಿಧನದ ಬಳಿಕ ಈ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿತ್ತು. ಹೀಗಾಗಿ ಎರಡು ದಿನದಿಂದ ಡಿವಿಆರ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸದ್ಯ ಡಿವಿಆರ್ ಗಾಗಿ ಇಂದು ಹಿರಿಯಡ್ಕ ಸಮೀಪ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.
ಶೀರೂರು ಮೂಲ ಮಠದ ಪಕ್ಕದಲ್ಲಿ ಸ್ವರ್ಣಾ ನದಿ ಇದೆ. ದೋಣಿ, ತೆಪ್ಪ ಬಳಸಿ ಡಿವಿಆರ್ ಗಾಗಿ ಹುಡುಕಾಟ ನಡಸಲಾಗಿದೆ. ಅಲ್ಲದೇ ಮುಳುಗು ತಜ್ಞರಿಂದ ಆಯಸ್ಕಾಂತ ಮುಳುಗಿಸಿ ಕಬ್ಬಿಣದ ಡಿವಿಆರ್ ಮೇಲಕ್ಕೆಳೆಯಲು ಪ್ರಯತ್ನ ಮಾಡಲಾಗಿದೆ. ಆದ್ರೆ ಡಿವಿಆರ್ ನೀರಿಗೆಸೆದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.