ಚೆನ್ನೈ: ಟಿಟಿವಿ ದಿನಕರನ್ ಸ್ಥಾಪಿಸಿರುವ ಅಮ್ಮ ಮಕ್ಕಳ್ ಮುನ್ನೆತ್ರಾ ಕಳಗಂ (ಎಎಂಎಂಕೆ) ಪಕ್ಷದ ಕಾರ್ಯಕರ್ತನಿಂದ ಚುನಾವಣಾ ಆಯೋಗ 1.48 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿರುವ ಘಟನೆ ತಮಿಳುನಾಡಿನ ಥೇನಿ ಜಿಲ್ಲೆಯ ಅಂಡಿಪಟ್ಟಿಯಲ್ಲಿ ಬುಧವಾರ ನಡೆದಿದೆ.
ಲೋಕಸಭಾ ಚುನಾವಣೆ 2019ರ ಮೊದಲ ಹಂತ ಪೂರ್ಣಗೊಂಡಿದ್ದು, ಎರಡನೇ ಹಂತದ ಮತದಾನ ಗುರುವಾರ ನಡೆಯಲಿದೆ. ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಮಂಗಳವಾರ ರಾತ್ರಿಯಿಂದ ಇಂದು ಬೆಳಗ್ಗೆ 5:30 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದೆ. ಈ ವೇಳೆ 94 ಕವರ್ ಗಳಲ್ಲಿ ಇಟ್ಟಿದ್ದ 1.48 ಕೋಟಿ ರೂ.ವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕವರ್ ಗಳ ಮೇಲೆ ವಾರ್ಡ್ ನಂಬರ್, ವಾರ್ಡಿನಲ್ಲಿರುವ ಮತದಾರರ ಸಂಖ್ಯೆ ಮತ್ತು ಮತದಾರಿಗೆ ತಲಾ 300 ರೂ. ನೀಡಬೇಕು ಎಂದು ಬರೆಯಲಾಗಿದೆ.
ಚುನಾವಣಾ ಅಧಿಕಾರಿಗಳು ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದಕ್ಕೆ ಎಎಂಎಂಕೆ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಭದ್ರತೆ ಒದಗಿಸಿದ್ದ ಪೊಲೀಸರು ತಕ್ಷಣವೇ ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಅಧಿಕಾರಿಗಳನ್ನು ರಕ್ಷಿಸಿದ್ದಾರೆ.
ಐಟಿ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಜಂಟಿಯಾಗಿ ಡಿಎಂಕೆ ಪಕ್ಷದ ಮುಖಂಡ ದೊರೈ ಮುರುಗನ್ ಅವರ ಮನೆಯ ಮೇಲೆ ಏಪ್ರಿಲ್ 10ರಂದು ದಾಳಿ ಮಾಡಿದ್ದರು. ಈ ವೇಳೆ ದೊರೈ ಮುರುಗನ್ ಅವರಿಗೆ ಸೇರಿದ್ದ ವೆಲ್ಲೂರಿನ ಗೋದಾಮಿನಲ್ಲಿ 11.50 ಕೋಟಿ ರೂ. ಹಣ ಪತ್ತೆಯಾಗಿತ್ತು. ಇದರಿಂದಾಗಿ ಹಣ ಹಂಚಿ ಮತದಾರರನ್ನು ಮನವೊಲಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಆರೋಪಿಸಿತ್ತು. ಈ ಸಂಬಂಧ ಚುನಾವಣಾ ಆಯೋಗವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಏಪ್ರಿಲ್ 14ರಂದು ಪತ್ರ ಬರೆದು, ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡುವಂತೆ ಶಿಫಾರಸು ಮಾಡಿತ್ತು. ಇದಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದು, ನಾಳೆ ನಡೆಯಬೇಕಾಗಿದ್ದ ಚುನಾವಣೆಯನ್ನು ರದ್ದು ಮಾಡಲಾಗಿದೆ. ಇದನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ವಿರೋಧಿಸಿ ನಿನ್ನೆ ರಾತ್ರಿ ಐಟಿ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದರು.