– ಆಂಧ್ರದಲ್ಲಿ ಸೆರೆಸಿಕ್ಕ ಆರೋಪಿಗಳು
ಬೆಂಗಳೂರು: ಬಸವೇಶ್ವರ ನಗರದಲ್ಲಿ ನಡೆದ ರೌಡಿ ಶೀಟರ್ ಸುನಿಲ್ ಕೊಲೆ ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆಂಧ್ರ ಮತ್ತು ಧರ್ಮಸ್ಥಳಕ್ಕೆ ಪೊಲೀಸರ ತಂಡ ತೆರಳಿತ್ತು. ಇನ್ನೆರಡು ತಂಡ ಬೆಂಗಳೂರಿನಲ್ಲಿಯೇ ಹುಡುಕಾಟ ಆರಂಭಿಸಿತ್ತು. ಆಂಧ್ರದಲ್ಲಿ ಗುರುವಾರ ರಾತ್ರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಸೇರಿ 9 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಡೆದಿದ್ದೇನು?: ಕಳೆದ ಬುಧವಾರ ಬಸವೇಶ್ವರ ನಗರದಲ್ಲಿರೋ ಸುನಿಲ್ ಮನೆಗೆ ನುಗ್ಗಿದ ನಾಲ್ವರ ತಂಡ ಆತನನ್ನು ಮನೆಯಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿತ್ತು. ಬಳಿಕ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಈ ವೇಳೆ ಸುನಿಲ್ ಪೋಷಕರಿಗೂ ಗಾಯಗಳಾಗಿತ್ತು.
ಹಿಂದಿನ ದಾಳಿಗೆ ಸೇಡು: ಸ್ಪಾಟ್ ನಾಗನ ಮೇಲೆ ರೌಡಿ ಸುನಿಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನಿಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಒಂದು ವರ್ಷದ ಹಿಂದಿನ ದಾಳಿಗೆ ಸುನಿಲ್ನನ್ನು ಬುಧವಾರದಂದು ಕೊಲೆ ಮಾಡಿದ್ದ.