ಬೆಂಗಳೂರು: ರೌಡಿಶೀಟರ್ ಒಬ್ಬನನ್ನು ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹೊಸೂರಿನಲ್ಲಿ ನಡೆದಿದೆ.
ಹೊಸೂರಿನ ಬಾಗಲೂರು ರಸ್ತೆಯ ನಿವಾಸಿ ಚೇತು(36) ಭೀಕರವಾಗಿ ಕೊಲೆಯಾದ ರೌಡಿಶೀಟರ್. ಚೇತುವನ್ನು 2 ದಿನಗಳ ಹಿಂದೆ ಮನೆ ಬಳಿಯಿಂದ ಅಪಹರಿಸಲಾಗಿತ್ತು. ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಆದರೆ ಇಂದು ಹೊಸೂರಿನ ಮತ್ತಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೇತುವಿನ ಶವ ರುಂಡ ಮುಂಡ ಬೇರ್ಪಟ್ಟ ರೀತಿಯಲ್ಲಿ ಪತ್ತೆಯಾಗಿದೆ.
ಚೇತು ಈ ಹಿಂದೆ ಹೊಸೂರಿನ ರಿಯಲ್ ಎಸ್ಟೇಟ್ ಉದ್ಯಮಿ ವಸಂತಮ್ ಹಾಗೂ ಸ್ಟಿಲ್ ವ್ಯಾಪಾರಿ ಮುಸ್ತಾಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈತನ ಮೇಲೆ ಹೊಸೂರು ಮತ್ತಿಕೆರೆ ಹಾಗೂ ಆನೇಕಲ್ ತಾಲೂಕಿನ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿದ್ದವು.
ಇದೀಗ ಮತ್ತಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.