ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಗಗನಸಖಿಯ ಕಿವಿ ಕಟ್ ಮಾಡಿದ್ದ ರೌಡಿಶೀಟರ್ ರಾತ್ರೋರಾತ್ರಿ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಅಜಯ್ ಅಲಿಯಾಸ್ ಜಾಕಿ ಕೋಡಿಗೆಹಳ್ಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಆರೋಪಿ ಜಾಕಿ ಕಳೆದ ಎರಡು ದಿನಗಳ ಹಿಂದೆ ಪ್ರೀತಿ ನಿರಾಕರಿಸಿದ್ದಕ್ಕೆ ಗಗನಸಖಿ ಕಿವಿ ಕಟ್ ಮಾಡಿದ್ದನು. ಈ ಪ್ರಕರಣ ಸಂಬಂಧ ಜಾಕಿ ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಆದರೆ ಪೊಲೀಸರಿಗೆ ಹೆದರಿ ಗುರುವಾರ ರಾತ್ರಿ ಕೋಡಿಗೆಹಳ್ಳಿ ಪೊಲೀಸರ ಮುಂದೆ ಆರೋಪಿ ಜಾಕಿ ಶರಣಾಗಿದ್ದಾನೆ.
ಏನಿದು ಪ್ರಕರಣ?
ಯುವತಿ ಇಂಡಿಗೊ ಏರ್ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಜಾಕಿ ಪ್ರಪೋಸ್ ಮಾಡಿದ್ದನು. ಆದರೆ ಯುವತಿ ಇದಕ್ಕೆ ನಿರಾಕರಿಸಿದ್ದಳು. ನಂತರ ಮನೆಯವರಿಗೆ ತಿಳಿಸಿ ರೌಡಿ ಅಜಯ್ಗೆ ಎಚ್ಚರಿಕೆ ಕೊಡಿಸಿದ್ದಳು. ಇದಕ್ಕೆ ಬಗ್ಗದ ಜಾಕಿ ಯುವತಿಯ ಮನೆಗೆ ತೆರಳಿ ಕಾರು ಹಾಗೂ ಬೈಕ್ ಗ್ಲಾಸ್ಗಳನ್ನು ಪುಡಿ ಮಾಡಿದ್ದ. ಈತನ ಕಾಟದಿಂದ ಬೇಸತ್ತ ಗಗನಸಖಿಯ ಮನೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸರು ಜಾಕಿಯನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು.
ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಕ್ಕೆ ಕೋಪಗೊಂಡ ಜಾಕಿ ಯುವತಿ ಕೆಲಸ ಮುಗಿಸಿ ಮನೆಗೆ ಕ್ಯಾಬ್ನಲ್ಲಿ ಬರುತ್ತಿದ್ದ ವೇಳೆ ಹೆಬ್ಬಾಳ ಬಳಿ ಹಲ್ಲೆ ಮಾಡಿದ್ದನು. ಈ ವೇಳೆ ಆರೋಪಿ, ನನ್ನ ಪ್ರೀತಿಸು, ನನ್ನ ಮೇಲಿನ ಕೇಸನ್ನು ಹಿಂದಕ್ಕೆ ಪಡೆದುಕೋ, ನಿನ್ನಿಂದಾಗಿ ನನ್ನ ಮೇಲೆ ರೌಡಿಶೀಟರ್ ಓಪನ್ ಆಗಿದೆ ಎಂದು ಯುವತಿಯ ಬಳಿ ಕೇಳಿಕೊಂಡಿದ್ದನು. ಆದರೆ ಆತನ ಮಾತಿಗೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ಜಾಕಿ ಚಾಕುವಿನಿಂದ ಯುವತಿಯ ಕಿವಿಗಳನ್ನು ರೌಡಿ ಕತ್ತರಿಸಿದ್ದನು.
ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಜಾಕಿ ತಾನಾಗಿಯೇ ಬಂದು ಶರಣಾಗಿದ್ದಾನೆ.