ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಮತ್ತು ಬಿಜೆಪಿ ಶಾಸಕ ರಘುಪತಿ ಭಟ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ಉಡುಪಿಯ ಕಕ್ಕುಂಜೆಯಲ್ಲಿ ನಡೆದಿದೆ. ರಾಜ್ಯ ಸರ್ಕಾರದ ನಗರೋತ್ಥಾನ ಕಾರ್ಯಕ್ರಮದ ಉದ್ಘಾಟನೆಗೆ ಸಂಬಂಧಪಟ್ಟಂತೆ ಈ ಗಲಾಟೆ ನಡೆದಿದೆ.
ಸರ್ಕಾರಿ ಕಾರ್ಯಕ್ರಮಕ್ಕೆ ಆ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡುತ್ತಿಲ್ಲ. ಈ ಬಾರಿಯೂ ಹಾಗೆಯೇ ರಸ್ತೆಗಳ ಉದ್ಘಾಟನೆ ಆಗುತ್ತಿದೆ ಎಂದು ಸಚಿವೆ ಜಯಮಾಲಾರನ್ನು ಶಾಸಕ ರಘುಪತಿ ಭಟ್ ತರಾಟೆಗೆ ತೆಗೆದುಕೊಂಡರು.
35 ಕೋಟಿ ವೆಚ್ಚದ ನಗರೋತ್ಥಾನ ಅನುದಾನದ ಉದ್ಘಾಟನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೂ ಆಹ್ವಾನವಿಲ್ಲ. ನಗರದೆಲ್ಲೆಡೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಸರಿನ ಬ್ಯಾನರ್ ಹಾಕಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದೆ ಎಂದು ಸಚಿವೆ ವಿರುದ್ಧ ಭಟ್ ಗರಂ ಆದರು.
ಕಾರಿನೊಳಗಿದ್ದ ಪ್ರಮೋದ್ ಮಧ್ವರಾಜ್:
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧವೂ ಶಾಸಕ ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದರು. ಮಾಜಿಗಳು, ನನ್ನ ವಿರುದ್ಧ ಸೋತವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಿ. ಸ್ಥಳೀಯ ಜನಪ್ರತಿನಿಧಿಗಳಿಗೂ ಆಹ್ವಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂತಿಮವಾಗಿ ಶಾಸಕರ ಮನವೊಲಿಸಿ ಮುಂದಿನ ಉದ್ಘಾಟನೆ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವುದಾಗಿ ಕರೆದುಕೊಂಡು ಹೋದರು. ಸುಮಾರು 15 ನಿಮಿಷಗಳ ವಾಗ್ವಾದ, ಮನವೊಲಿಕೆ ನಡೆಯುತ್ತಿದ್ದರೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯ ಪ್ರವೇಶ ಮಾಡದೆ ಕಾರಿನಲ್ಲೇ ಕುಳಿತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv