ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 30ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ದೇವಪ್ಪ, ಶಂಕ್ರಪ್ಪ ಹೊರಪೇಟೆ ಸೇರಿದಂತೆ ಇತರರ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ತಗಡಿನ ಮೇಲ್ಛಾವಣಿಯುಳ್ಳ ಮನೆಯವರು ಪಕ್ಕದ ಮನೆಗಳಲ್ಲಿ ಮಲಗಿದ್ದರು.
ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ಘಟನೆ ನಡೆದು ಕೆಲವು ಗಂಟೆಗಳು ಕಳೆದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿಯಲ್ಲಿ ತಂಪೆರದ ವರುಣ ದೇವ: ಬಿರುಬಿಸಿಲ ನಾಡು ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮಳೆಯಾಗಿದೆ. ಮಳೆಯ ಆಗಮನದಿಂದ ಬಿಸಿಲಿನಿಂದ ಕಂಗಾಲಾಗಿದ್ದ ಜನರು ಸಂತೋಷಗೊಂಡಿದ್ದಾರೆ.