ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೋಸ್ಕರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸಾಹಸಕ್ಕೆ ಕೈಹಾಕಿದ್ದಾರೆ. ಎಷ್ಟು ಕೋಟಿ ಖುರ್ಚಾದರೂ ಪರವಾಗಿಲ್ಲ ದರ್ಶನ್ ಅವರಿಗೆ ಈ ಐತಿಹಾಸಿಕ ಸಿನಿಮಾ ಮಾಡಬೇಕೆಂದುಕೊಂಡಿದ್ದಾರೆ.
ಹೌದು. `ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಬಿಡುಗಡೆಯಾಗುವ ಮುನ್ನವೇ ದರ್ಶನ್ ಮದಕರಿನಾಯಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ, ದುರ್ಯೋಧನ ನಂತರ ವೀರಮದಕರಿಯಾಗಿ ಅಭಿಮಾನಿಗಳ ಮುಂದೆ ಬರಲು ದರ್ಶನ್ ಸಜ್ಜಾಗಿದ್ದಾರೆ. ಕೋಟೆ ನಾಡಿನ ಕೊನೆಯ ದೊರೆ ವೀರಮದಕರಿಯ ಜೀವನ ಚರಿತ್ರೆಯನ್ನು ಬೆಳ್ಳಿ ತೆರೆಮೇಲೆ ತರೋದಕ್ಕೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮುಂದಾಗಿದ್ದಾರೆ. ಮದಕರಿ ನಾಯಕನ ಪಾತ್ರಕ್ಕೆ ದರ್ಶನ್ ಸೂಕ್ತ, ಕೋಟೆ ನಾಡಿನ ನಾಯಕನ ಪಾತ್ರವನ್ನು ಅವರಿಂದಲೇ ಮಾಡಿಸಬೇಕು ಎಂದು ತೀರ್ಮಾನಿಸಿದ್ದಾರೆ.
ಮದಕರಿ ನಾಯಕನ ಜೀವನದ ಬಗ್ಗೆ ಬೆಳಕು ಚೆಲ್ಲುವಂತಹ ಹಲವು ಸಿನಿಮಾಗಳು ಈ ಹಿಂದೆ ಕನ್ನಡದಲ್ಲಿ ಮೂಡಿಬಂದಿವೆ. ಕಲ್ಲರಳಿ ಹೂವಾಗಿ ಸಿನಿಮಾದಲ್ಲಿ ರೆಬೆಲ್ಸ್ಟಾರ್ ಅಂಬರೀಶ್ ಅವರು ಮದಕರಿ ನಾಯಕನ ಪಾತ್ರದಲ್ಲಿ ನಟಿಸಿದ್ದರು. ವೀರಮದಕರಿ ಟೈಟಲ್ನಲ್ಲಿ ಕಿಚ್ಚ ಸುದೀಪ್ ಸಿನಿಮಾ ಮಾಡಿದ್ದರು. ಇದೀಗ ಚಾಲೆಂಜಿಂಗ್ ಸ್ಟಾರ್ ಸರದಿ. ಚಿತ್ರಕ್ಕೆ `ಗಂಡುಗಲಿ ಮದಕರಿ ನಾಯಕ’ ಟೈಟಲ್ ಫಿಕ್ಸ್ ಮಾಡಿದ್ದು, ಮದಕರಿ ನಾಯಕನ ಜೀವನ ಚರಿತ್ರೆಯನ್ನು ತೆರೆಮೇಲೆ ಕಟ್ಟಿ ಕೊಡುವಂತಹ ಪ್ರಯತ್ನಕ್ಕೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೈಹಾಕಿದ್ದಾರೆ.
1983ರಲ್ಲಿ ಬಿ.ಎಲ್ ವೇಲು ಅವರು ಬರೆದಂತಹ ಗಂಡುಗಲಿ ಮದಕರಿ ನಾಯಕ ಕಾದಂಬರಿಯನ್ನ ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದುರ್ಗದಲ್ಲಿ ಬೀಡುಬಿಟ್ಟಿರುವ ಬಿ.ಎಲ್ ವೇಲು ಅವರು ಗಂಡುಗಲಿ ಮದಕರಿ ನಾಯಕ ಸಿನಿಮಾ ಚಿತ್ರಕತೆ ರಚಿಸೋದರಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಕಳೆದ ಏಳು ತಿಂಗಳಿಂದ ಪ್ರಿಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.
`ಗಂಡುಗಲಿ ಮದಕರಿ ನಾಯಕ’ ಚಿತ್ರ ಜನವರಿ 15 2019ರಂದು ಸೆಟ್ಟೇರಲಿದೆ. ಸ್ಕ್ರಿಪ್ಟಿಂಗ್ ಹಾಗೂ ಸ್ಟಾರ್ ಕಾಸ್ಟಿಂಗ್ ಫೈನಲೈಸ್ ಮಾಡುವುದರಲ್ಲಿ ರಾಕ್ಲೈನ್ ವೆಂಕಟೇಶ್ ಹಾಗೂ ರಾಜೇಂದ್ರ ಸಿಂಗ್ ಬಾಬು ಬ್ಯುಸಿಯಾಗಿದ್ದಾರೆ. ಇತ್ತ ದರ್ಶನ್ ಕೂಡ ಯಜಮಾನ, ಒಡೆಯ, ಡಿ 53 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv