ಮಂಡ್ಯ: ಲೋಕಸಭಾ ಚುನಾವಣೆ ನಂತರ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಲಿದ್ದಾರೆ.
ಯಶ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅಭಿಮಾನಿಯೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ ಎಂದು ಉಚ್ಚಾಟಿತ ಕೆಪಿಸಿಸಿ ಸದಸ್ಯ, ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಹೇಳಿದ್ದಾರೆ.

ಚುನಾವಣೆ ಮುಗಿದ ಬಳಿಕ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದರು. ಇದೀಗ ಅಭಿಮಾನಿಯ ಮನೆಯ ಗೃಹ ಪ್ರವೇಶಕ್ಕೆ ಯಶ್ ಆಗಮಿಸುತ್ತಿದ್ದಾರೆ. ಅದೇ ರೀತಿ ಮಂಡ್ಯ ಜನರ ಕಷ್ಟ ಹಾಗೂ ಸುಖಗಳಿಗೆ ಯಶ್ ಹಾಗೂ ದರ್ಶನ್ ಸ್ಪಂದಿಸುತ್ತಾರೆ. ತಮ್ಮ ಕೆಲಸದ ನಡುವೆ ಬಿಡುವಾದಾಗ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಇಲ್ಲಿಯ ಜನರ ಜೊತೆ ಇರುತ್ತಾರೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ.
ಸದ್ಯ ಯಶ್ ಆಗಮನದ ಹಿನ್ನೆಲೆಯಲ್ಲಿ ಸಚ್ಚಿದಾನಂದ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತಕ್ಕೆ ಬೆಸಗರಹಳ್ಳಿಯಲ್ಲಿ ಸಿದ್ಧತೆ ನಡೆಯುತ್ತಿದೆ.
