ಮಂಡ್ಯ: ನಾವು ಮಾಡೋದು ತಪ್ಪು ಅಂದರೆ ಆ ತಪ್ಪನ್ನೇ ಮಾಡುತ್ತೇವೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡೋದು ಬಿಡಿ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಮಂಡ್ಯದ ಸಮಾವೇಶದಲ್ಲಿ ಮಾತನಾಡಿದ ಯಶ್, ನನಗೆ ತುಂಬಾ ಖುಷಿಯಾಯಿತು ಏಕೆಂದರೆ ಬೆಳಗ್ಗೆ ಒಂದು ಘಟನೆ ನಡೆಯಿತು. ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಲು ಖುಷಿಯಲ್ಲಿ ಬಂದಾಗ ಅಕ್ಕನ ಕಣ್ಣಿನಲ್ಲಿ ನೀರಿತ್ತು. ನಾನು ಯಾಕಕ್ಕಾ ಯಾರಾದ್ರು ಏನಾದ್ರು ಹೇಳಿದರ ಎಂದು ಕೇಳಿದೆ. ಆಗ ಅವರು ನನಗೆ ಅಂದ್ರೆ ಪರ್ವಾಗಿಲ್ಲ, ನಿನ್ನ ಮತ್ತೆ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತಾಡ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಾನು, ಅಕ್ಕಾ ನಿಮಗೆ ಒಂದು ಮಾತು ಹೇಳುತ್ತೇನೆ. ನಾವು ಮಾಡುತ್ತಿರುವುದು ತಪ್ಪಲ್ಲ ಎಂದು ಎಲ್ಲರಿಗೂ ಗೊತ್ತು. ಇದು ಅಧಿಕಾರ ಆಸೆಗೋ ಅಥವಾ ಬೇರೆ ಲಾಭಕ್ಕೋ ನಾವು ಇಲ್ಲಿ ಬಂದು ನಿಂತಿಲ್ಲ. ಇದು ತಪ್ಪು ಎಂದು ಕೆಲವರು ಅಂದುಕೊಂಡಿದರೆ, ಆ ರೀತಿ ಅಂದುಕೊಂಡವರಿಗೆ ಹೇಳ್ತೀನಿ ನಾವು ತಪ್ಪು ಮಾಡತ್ತೇವೆ. ಆ ತಪ್ಪು ಸಾಯೋವರೆಗೂ ಮಾಡುತ್ತೇವೆ. ಏಕೆಂದರೆ ಅಂಬರೀಶ್ ಅಣ್ಣ ಅವರು ನನಗೆ ಅಷ್ಟು ಮಾಡಿದ್ದಾರೆ. ಸುಮ್ಮನೆ ನಾವು ಇಲ್ಲಿ ನಾಟಕಕ್ಕೆ ಬಂದಿಲ್ಲ ಎಂಬುದನ್ನು ತಿಳಿಸಿದೆ ಎಂದರು.
ಸಿನಿಮಾದವರು ಸಿನಿಮಾದವರು ಎಂದು ಹೇಳುತ್ತಾರೆ. ನಾವೇನು ಅಂರ್ಟಾಟಿಕಾ ಅಥವಾ ಪಾಕಿಸ್ತಾನದಿಂದ ಬಂದಿದ್ದೀವಾ. ಇದೇ ಮೈಸೂರಿಯಿಂದ ಮಂಡ್ಯ ರೋಡ್ ದಾಟಿ ಬೆಂಗಳೂರಿಗೆ ಹೋಗಿ ಜೀವನ ಕಟ್ಕೊಂಡಿರೋದು. ಇದೇ ಪಾಳಲ್ಲಿ ಪಂಪ್ ಹೌಸ್ ಹಾಗೂ ಕೆಆರ್ಎಸ್ನಲ್ಲಿ ಈಜಿದ್ದೀವಿ. ಮಂಡ್ಯದಲ್ಲಿ ಕಬ್ಬಿನ ಹಾಲು ಕೂಡ ಕುಡಿದಿದ್ದೀವಿ ಹಾಗೂ ಬೆಲ್ಲವನ್ನು ತಿಂದಿದ್ದೀವಿ. ಮಂಡ್ಯ ಜನತೆ ಪ್ರೀತಿಯಿಂದ ನಮ್ಮನ್ನು ಬೆಳೆಸಿ ಸರಿಯಾದ ಸ್ಥಾನದಲ್ಲಿ ನಿಲ್ಲಿಸಿದೆ. ಇಡೀ ಕರ್ನಾಟಕಕ್ಕೆ ನಮ್ಮ ಋಣ ಇದೆ. ಸ್ವಲ್ಪ ಜಾಸ್ತಿ ಮಂಡ್ಯ ಮೇಲೆ ಸ್ವಲ್ಪ ಜಾಸ್ತಿ ಇದೆ ಹಾಗೂ ಮಂಡ್ಯ ಮೇಲೆ ನಮಗಿದೆ ಎಂದು ಹೇಳಿದರು.
ಎಲ್ಲಾದರೂ ಜಾಸ್ತಿ ಜನ ಇರುವಾಗ ಒಂದು ಸೌಂಡ್ ಕೇಳುತ್ತೆ ತಿರುಗಿ ನೋಡಿದಾಗ ನಾನು ಮಂಡ್ಯದವನು ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಮಂಡ್ಯದವರು ನಮ್ಮನ್ನು ಸ್ವಂತವಾಗಿ ತೆಗೆದುಕೊಂಡಿದ್ದಾರೆ. ನನಗಿಂತ ಜಾಸ್ತಿ ದರ್ಶನ್ ಅವರನ್ನು ಇಷ್ಟಪಡುತ್ತಾರೆ. ಎಲ್ಲೋ ಒಂದು ಕಡೆ ಕೇಳಿದೆ. ಇವರಿಬ್ಬರು ಹಾವು – ಮುಂಗುಸಿ ತರಹ ಕಿತ್ತಾಡುತ್ತಿದ್ದರು. ಈಗ ಒಂದಾಗಿದ್ದಾರೆ ಎಂಬ ವಿಷಯ ಕೇಳಿದೆ. ನಾವು ನಮ್ಮ ಹೊಟ್ಟೆಪಾಡು ನೋಡುತ್ತಿದ್ದೀವಿ ಹೊರತು ನಮ್ಮ ನಮ್ಮ ಅನುಕೂಲಕ್ಕೆ ಹಗಲು-ರಾತ್ರಿ ಬದಲಾಗುತ್ತಿರಲಿಲ್ಲ. ಅದೆಲ್ಲ ರಾಜಕೀಯದಲ್ಲಿ ನಡೆಯುತ್ತೆ, ಸಿನಿಮಾದಲ್ಲಿ ಅಲ್ಲ ಎಂದು ಹೇಳಿದರು.
ಸಿನಿಮಾದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಈ ನಾಡಿನ ಜನತೆ ಸುಮ್ಮಸುಮ್ಮನೆ ಯಾರನ್ನು ಎದೆ ಮೇಲೆ, ತಲೆ ಮೇಲೆ ಇಟ್ಟುಕೊಂಡು ಮೆರೆಸುವುದಿಲ್ಲ. ಕೋಟಿ ಜನರಲ್ಲಿ ಕೆಲವೇ ಕೆಲವು ಜನರು ನಮ್ಮನ್ನು ಇಷ್ಟಪಡುತ್ತಾರೆ ಎಂದರೆ ನಮಗೂ ಸಣ್ಣ ಯೋಗ್ಯತೆ ಇದೆ ಎಂದು ತಿಳಿದುಕೊಳ್ಳಿ. ದಯವಿಟ್ಟು ಇನ್ನೊಂದು ಸರಿ ಈ ರೀತಿ ಮಾತಾನಾಡಬೇಡಿ. ಇಲ್ಲಿ ಬಂದವರು ಹಣಕ್ಕಾಗಿ, ಬಲವಂತಕ್ಕಾಗಿ ಅಥವಾ ತೋರಿಕೆಗಾಗಿ ಬಂದಿಲ್ಲ. ಜನರು ಯಶ್ ಹಾಗೂ ದರ್ಶನ್ ಅವರನ್ನು ನೋಡಲು ಬಂದಿಲ ಎಂದರು.
ಎಲ್ಲ ಜನರು ಮುಂದೆ ದಾರಿ ನೋಡುತ್ತಿದ್ದರು. ರಸ್ತೆ ಇಕ್ಕಲದಲ್ಲಿ ಜನ ಬಂದಿದರು. ಮಂಡ್ಯ ಜನತೆಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಸ್ವಾಭಿಮಾನಕ್ಕೆ ಮಂಡ್ಯ ಜನ ಮನೆ-ಮಠ ಕಳೆದುಕೊಂಡರು ಸ್ವಾಭಿಮಾನಿ ಪಡೆದುಕೊಳ್ಳುತ್ತಾರೆ. ಮನೆಮಗಳನ್ನು ಕೈ ಬಿಡ್ತಾರಾ. ಸುಮಲತಾ ಸೋಲಲಿ ಗೆಲ್ಲಲಿ ಮಂಡ್ಯದಲ್ಲೇ ಇರುತ್ತಾರೆ. ಸುಮಲತಾ ಅವರನ್ನು ಗೆಲ್ಲಿಸಿದ್ದರೆ ದೆಹಲಿಯವರೆಗೂ ಮಂಡ್ಯದ ಸೌಂಡು ಕೇಳುವ ರೀತಿ ಮಾಡುತ್ತಾರೆ ಎಂದು ಯಶ್ ಹೇಳಿದರು.