ಮೈಸೂರು: ಚುನಾವಣಾ ಪ್ರಚಾರಕ್ಕೆ ರಾಂಕಿಂಗ್ ಸ್ಟಾರ್ ಯಶ್ ಎಂಟ್ರಿ ನೀಡಿದ್ದು, ಕೆಆರ್ ನಗರದ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್ ಪರ ಪ್ರಚಾರ ಮಾಡಿದ್ದಾರೆ.
ಯಶ್ ಕೆ.ಆರ್ ನಗರದ ತೋಪಮ್ಮ ದೇವಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಸಿದ್ದು, ಕೆಆರ್ ನಗರದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದರು. ಯಶ್ ಬಂದಿದ್ದಾರೆ ಎನ್ನುವ ವಿಚಾರ ತಿಳದು ರಾಕಿಂಗ್ ಸ್ಟಾರ್ ಅವರನ್ನು ನೋಡಲು ಜನ ಮುಗಿಬಿದ್ದರು.
ನಾನು ಜನರಿಂದ ಸ್ಟಾರ್ ಆಗಿದ್ದೇನೆ. ಈ 5 ವರ್ಷ ಜನಗಳ ಜೀವನ ಈ 10 ದಿನದ ಕೆಲಸಗಳಿಂದ ನಿರ್ಧಾರ ಆಗುತ್ತದೆ. ಈ ಕೆಲಸದಲ್ಲಿ ನನ್ನ ಕರ್ತವ್ಯ ಕೂಡ ಇದೆ. ಹಾಗಾಗಿ ನನಗೆ ನಂಬಿಕೆ ಇರುವವರು, ನನ್ನ ಸ್ನೇಹಿತರು, ನನ್ನ ಒಡನಾಟದಲ್ಲಿ ಇರುವವರನ್ನು ಬೆಂಬಲಿಸುತ್ತಿದ್ದೇನೆ. ನನಗೆ ಸಾಕಷ್ಟು ಮಂದಿ ಪ್ರಚಾರಕ್ಕೆ ಕೇಳಿಕೊಂಡರು. ಆದರೆ ಯಾರೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೋ, ಗುರಿಯನ್ನು ಇಟ್ಟುಕೊಳ್ಳುತ್ತಾರೋ ಅವರನ್ನು ನಾನು ಬೆಂಬಲಿಸುತ್ತೇನೆ. ಯಾವುದೇ ಪಕ್ಷ, ಯಾವುದೇ ಸಿದ್ಧಾಂತಕ್ಕೆ ನಾನು ಬೆಲೆ ಕೊಡಲ್ಲ ಎಂದು ಯಶ್ ತಿಳಿಸಿದರು.
ನನಗೆ ಸಾರಾ ಮಹೇಶ್ ಎಂದರೆ ಬಹಳ ಪ್ರೀತಿ. ಅವರು ಮಾತಿಗೆ ನಿಲ್ಲೋ ವ್ಯಕ್ತಿ. ನಾವು ಬಹಳ ವರ್ಷದಿಂದ ಸ್ನೇಹಿತರು. ಅಲ್ಲದೇ ನನಗೆ ಹಳ್ಳಿಗಳೆಂದರೆ ಸಾಕಷ್ಟು ಇಷ್ಟ. ಹೀಗಾಗಿ ನಾನು ತುಂಬಾ ಇಷ್ಟಪಡೋ ಸಾರಾ ಮಹೇಶ್ಗೆ ಬೆಂಬಲಿಸುತ್ತಿದ್ದೇನೆ ಎಂದು ಹೇಳಿದರು.
ನಾನು ಯಾವ ಪಕ್ಷಕ್ಕೂ ಅಥವಾ ಸಿದ್ಧಾಂತಕ್ಕೆ ಬೆಲೆ ಕೊಡುವುದ್ದಿಲ್ಲ. ನಾನು ವ್ಯಕ್ತಿಗಳಿಗೆ ಬೆಲೆ ಕೊಡುತ್ತೇನೆ. ಆ ವ್ಯಕ್ತಿಗಳು ನನ್ನ ಸ್ನೇಹಿತರು. ಹಾಗಾಗಿ ನಾನು ಅವರನ್ನು ಬೆಂಬಲಿಸುತ್ತಿದ್ದೇನೆ. ಜನರು ನನ್ನನ್ನು ಬೆಂಬಲಿಸುತ್ತಾರೆ. ಮುಂದೆ ಅವರು ಅಧಿಕಾರಕ್ಕೆ ಬಂದಾಗ ನಾನು ಅವರ ಕೈಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಸುತ್ತೇನೆ. ಅದು ನನ್ನ ಜವಾಬ್ದಾರಿ ಎಂದು ಯಶ್ ಹೇಳಿದ್ದಾರೆ.
ನಾನು ಎರಡೂ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೀನಿ ಎಂದು ಜನಗಳು ಕನ್ಫ್ಯೂಸ್ ಆಗುವುದು ಬೇಡ. ಯವಕರು ಜನಪರ ಕಾಳಜಿ ಹಾಗೂ ಕೆಲಸ ಮಾಡೋ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಯಾರೂ ಆ ಕ್ಷೇತ್ರದಲ್ಲಿ ಇರುತ್ತಾರೆ. ಯಾರು ಕೆಲಸ ಮಾಡುವವರು ಎಂದು ಅವರಿಗೆ ಅನಿಸುತ್ತದ್ದೆಯೋ ಆ ಅಭ್ಯರ್ಥಿಗೆ ಅವರು ವೋಟ್ ಮಾಡಲಿ ಎಂದು ಯಶ್ ತಿಳಿಸಿದ್ದಾರೆ.
ಬೆಳಗ್ಗೆ ಸಾ ರಾ ಮಹೇಶ್ ಪರ ಪ್ರಚಾರ ಮಾಡಿದರೆ, ಸಂಜೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್ದಾಸ್ ಪರ ಪ್ರಚಾರ ನಡೆಸುತ್ತೇನೆ ಎಂದು ಯಶ್ ತಿಳಿಸಿದರು.