ಬೆಂಗಳೂರು: ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿರುವ ಕೊಡಗಿನ ಜನತೆಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗದ ಮೂಲಕ ನೆರವಾಗುತ್ತಿದ್ದಾರೆ.
ಅಲ್ಲಿನ ಜನರಿಗೆ ಅವಶ್ಯಕವಾದ ಬ್ರೆಡ್, ಬಿಸ್ಕೆಟ್ ಸೊಳ್ಳೆಬತ್ತಿ, ಇನ್ನಿತರ ಪ್ರಮುಖವಾದ ತಿಂಡಿ ತಿನಿಸು ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಮೀರಿದ್ದು, ಬಂದಿರುವಂತಹ ಸರಕುಗಳನ್ನು ಅವರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಜನರೆಲ್ಲರೂ ಕೊಡಗಿನ ಸ್ಥಿತಿಗೆ ಮರುಗಿ ಸಹಾಯವನ್ನು ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾದ ಬಳಿಕ ಜೀವನಕ್ಕೆ ಪರಿಹಾರವನ್ನು ನೀಡಬೇಕಾದ ಕೆಲಸ ಮಾಡಬೇಕು ಎಂದು ಯಶ್ ಹೇಳಿದರು.
ನಮ್ಮವರು ಕೂಡ ಮಡಿಕೇರಿಗೆ ಸಾಮಾಗ್ರಿಗಳೆಲ್ಲವನ್ನು ತಲುಪಿಸಿ ಬಂದಿದ್ದಾರೆ. ಕೆಲವು ಕಡೆ ನಿನ್ನೆ ಕೂಡ ಹೋಗಿ ಬಂದ ಸ್ಥಳದಲ್ಲೂ ಭೂಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದೆಂದು ಪ್ರಾರ್ಥಿಸೋಣ ಎಂದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಾ ರಾ ಮಹೇಶ್ ಅವರೊಂದಿಗೆ ಮಾತನಾಡಿದಾಗ ಅವರು ಇಲ್ಲಿನ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಲಿ ಬಳಿಕ ನೀವು ಏನಾದರೂ ನೆರವು ನೀಡಬಹುದು ಎಂದಿದ್ದಾರೆ. ಸದ್ಯಕ್ಕೆ ಎಲ್ಲಾ ಸಾಮಾಗ್ರಿಗಳ ಹೋಗಿ ತಲುಪಿವೆ. ಮುಂದಿನ ದಿನಗಳಲ್ಲಿ ದೊಡ್ಡ ಪರೀಕ್ಷೆ ಎದುರಾಗುತ್ತದೆ ಜನರು ಅದಕ್ಕೆ ಸಹಾಯ ಮಾಡಲಿ ಎಂದು ಯಶ್ ಜನರಿಗೆ ಕರೆ ನೀಡಿದರು.
ಇಂತಹ ದುರಂತ ಸ್ಥಿತಿಯಲ್ಲೂ ಕೂಡ ಕೊಡಗಿನಲ್ಲಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿರುವುದು ಬೇಸರವನ್ನು ವ್ಯಕ್ತಪಡಿಸುತ್ತದೆ. ಅವರು ಇಂತಹ ಸಂದರ್ಭದಲ್ಲಿ ಮಾನವೀಯತೆ ತೋರಿಸಬೇಕು, ಇಲ್ಲದಿದ್ದರೆ ಅವರನ್ನು ಮನುಷ್ಯರು ಅನ್ನುವುದಕ್ಕೆ ಅರ್ಹರಲ್ಲ. ನೆರವು ನೀಡುವ ಮೂಲಕ ಕರ್ನಾಟಕ ಜನತೆ ತನ್ನ ಸಹೃದಯವನ್ನು ತೋರಿಸಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv