ಮಂಡ್ಯ: ಬಿಸಿಲು ನನಗೆ ಹೊಸದಲ್ಲ. ಏಕೆಂದರೆ ನಾನು ಬಿಸಿಲಿನಲ್ಲೇ ಆಡಿ ಬೆಳೆದವನು. ಕುಮಾರಸ್ವಾಮಿಗಳು ಅವರ ಅಭ್ಯರ್ಥಿ ಬಗ್ಗೆ ಹೀಗೆ ಹೇಳಿರಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಟಾಂಗ್ ಕೊಟ್ಟಿದ್ದಾರೆ.
ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಗಳು. ಆರೂವರೆ ಕೋಟಿ ಜನ ಅವರೇ ಬೇಕೆಂದು ಬಹಳ ಕಷ್ಟಪಟ್ಟು ಆ ಸ್ಥಾನದಲ್ಲಿ ಕೂರಿಸಿದ್ದಾರೆ. ಆ ಸ್ಥಾನದಲ್ಲಿ ಕುಳಿತಿರುವಂತಹ ವ್ಯಕ್ತಿ ಮಾತನಾಡಿದರೆ ನೂರು ಅರ್ಥ ಇರುತ್ತದೆ. ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದವರು. ಬಿಸಿಲಲ್ಲೇ ಬೆಳೆದುಕೊಂಡು ಆಟವಾಡಿಕೊಂಡು, ಚಿನ್ನಿದಾಂಡು ಆಡಿ ಜೀವನದಲ್ಲಿ ಕಷ್ಟಪಟ್ಟು ನಮ್ಮ ಸ್ವಂತ ದುಡಿಮೆಯಲ್ಲಿ ಕಾರು, ಮನೆ ನೋಡಿದವರು. ನಮಗೆ ಆ ಬಿಸಿಲು, ನೆರಳು ಹೊಸದಲ್ಲ. ಸ್ವಲ್ಪ ಹೊತ್ತು ಹೊರಗೆ ಬಂದರೆ, ನಮಗೆ ಏನೂ ಆಗಲ್ಲ ಎಂದು ಯಶ್ ಹೇಳಿದರು. ಇದನ್ನೂ ಓದಿ: ಛತ್ರಿ ಹಿಡಿಸಿಕೊಂಡು ಶೂಟಿಂಗ್ನಲ್ಲಿರ್ತಿದ್ರು, ಬಿಸಿಲಿಗೆ ಬಂದಿದ್ದಾರೆ, ರೈತರ ಕಷ್ಟ ಅರ್ಥ ಆಗ್ಲಿ ಬಿಡಿ: ದರ್ಶನ್, ಯಶ್ಗೆ ಸಿಎಂ ಟಾಂಗ್
ಯಾರು ಹುಟ್ಟಿದಾಗಿನಿಂದ ನೆರಳಿನಲ್ಲಿ ಇದ್ದು, ಈಗ ಬಿಸಿಲಿನಲ್ಲಿ ಬಂದಿದ್ದಾರೋ ಅವರ ಬಗ್ಗೆ ಹೇಳಿದ್ದಾರೆ. ಅವರು ಬಹುಶಃ ತಮ್ಮ ಅಭ್ಯರ್ಥಿ ಬಗ್ಗೆ ಹೇಳಿರಬಹುದು. ನೀವು ಏಕೆ ಸುಮ್ಮನೆ ಕನ್ಫೂಸ್ ಆಗುತ್ತೀರಿ. ಸಿನಿಮಾದವರು ಎಂದು ನೀವು ಹಾಗೇ ಅಂದುಕೊಳ್ಳುತ್ತೀರಾ. ಅವರ ಅಭ್ಯರ್ಥಿ ಕೂಡ ಸಿನಿಮಾದವರೇ. ನೀವೂ ಸುಮ್ಮನೆ ಕನ್ಫೂಸ್ ಆಗುತ್ತಿದ್ದೀರಿ. ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಗೊತ್ತಾಗುತ್ತೆ ಎಂದು ಪಬ್ಲಿಕ್ ಟಿವಿಗೆ ಯಶ್ ಪ್ರತಿಕ್ರಿಯಿಸಿದರು.
sಸಂಸದ ಶಿವರಾಮೇಗೌಡ ಅವರು ಸುಮಲತಾ ಅವರು ಗೌಡ್ತಿ ಇಲ್ಲ ಎಂದು ಹೇಳುತ್ತಿದ್ದರು. ಈಗ ಸುಮಲತಾ ಗೌಡ್ತಿ ಎನ್ನುವುದರ ಬಗ್ಗೆ ನನಗೆ ವಿರೋಧ ಇಲ್ಲ ಎಂದು ಮಾತು ಬದಲಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಶ್, ಯಾರು ಮಾತು ಬದಲಿಸುತ್ತಾರೆ ಎನ್ನುವುದನ್ನು ನಾವು ನೋಡುತ್ತಾ ಕುಳಿತುಕೊಳ್ಳಲು ಆಗುವುದಿಲ್ಲ. ಜನರು ಅದನ್ನೆಲ್ಲ ನೋಡುತ್ತಿದ್ದಾರೆ. ನಾವು ಒಂದು ನಿರ್ಧಾರ ತೆಗೆದುಕೊಂಡರೆ, ಆ ನಿಲುವಿಗೆ ನಿಲ್ಲಬೇಕು ಇಲ್ಲ ಅಂದರೆ ಮಾತನಾಡುವುದಕ್ಕೆ ಹೋಗಬಾರದು ಎಂದರು.
ಸಾಕಷ್ಟು ಕೆಲಸ ಹಾಗೂ ಅಭಿವೃದ್ಧಿಗಳು ಆಗಬೇಕು ಎಂದು ಗ್ರಾಮಗಳಲ್ಲಿ ಜನರು ಹೇಳುತ್ತಿದ್ದಾರೆ. ಕಣ್ಣು ಒರೆಸುವ ಕೆಲಸ ಆಗಬಾರದು. ಅಭಿವೃದ್ಧಿ ಕೆಲಸ ಆಗಬೇಕು. ಸುಮಲತಾ ಅವರು ಅಭಿವೃದ್ಧಿ ಮಾಡುವ ಕಡೆ ಆಸಕ್ತಿ ತೋರಿಸುತ್ತಿದ್ದಾರೆ. ಅವರು ನಿಂತುಕೊಂಡು ಮಾತನಾಡುತ್ತಾರೆ ಎಂದು ಯಶ್ ಹೇಳಿದರು.