ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಸುಮಲತಾ ಪರ ಪ್ರಚಾರ ಮಾಡುವಾಗ ಮಂಡ್ಯ ಜನರ ಸ್ವಾಭಿಮಾನವನ್ನು ಕೆದಕಿದ್ದು, ನೀವು ಹುಷಾರಗಿರಬೇಕು. ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೆ.ಆರ್ ಪೇಟೆಯ ಸಾಸಲು ಗ್ರಾಮದಲ್ಲಿ ಪ್ರಚಾರ ಮಾಡುವಾಗ, ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಇಷ್ಟು ದಿನ ಪ್ರಚಾರ ಮಾಡಿಕೊಂಡು ಬಂದಿದ್ದೇವೆ. ಅಂಬರೀಶ್ ಅವರು ಮಂಡ್ಯದ ಗಂಡು, ಮಂಡ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಕೆಲವು ದಿನಗಳಿಂದ ಎಲ್ಲೇ ಹೋದರೂ ಕೊನೆಯ ಮೂರು ದಿನ ಹುಷಾರಾಗಿ ಇರಬೇಕು ಎಂದು ಹೇಳುತ್ತಿರುತ್ತಾರೆ. ನಾವಲ್ಲ ಜನರು ಕೂಡ ಹುಷಾರಾಗಿರಬೇಕು ಎಂದರು.
ಇನ್ನೂ ಮೂರು ದಿನ ನೀವು ಸೈನಿಕರಾಗಿ ಕಾಯಿರಿ. ಬಹಳಷ್ಟು ಆಡಿಯೋಗಳನ್ನು ಕೇಳಿದ್ದೇವೆ. ನೀವು ಕೇಳಿದ್ದೀರಿ. ದುಡ್ಡು ಮತ್ತು ಬೇರೆ, ಬೇರೆ ಕೆಟ್ಟ ದಾರಿಯಲ್ಲಿ ಚುನಾವಣೆ ನಡೆಯಬಾರದು. ನೀವೆಲ್ಲರೂ ಸ್ವಾಭಿಮಾನ ಮಾರಾಟಕ್ಕಿಲ್ಲ ಎಂಬುದನ್ನು ತಿಳಿಸಿ ಎಂದು ಮತದಾರರ ಬಳಿ ಮನವಿ ಮಾಡಿಕೊಂಡರು.
ಜನರು ಸ್ವಾಭಿಮಾನ ಮಾರಿಕೊಳ್ಳಬಾರದು. ಅವರ ಪ್ರಯತ್ನ ಅವರು ಮಾಡಲಿ. ಆದರೆ ನಿಮ್ಮ ಪರ ಯಾರು ಕೆಲಸ ಮಾಡುತ್ತಾರೋ ಅವರಿಗೆ ಮತಹಾಕಿ. ಸುಮಲತಾ ಅಂಬರೀಶ್ ಅವರು ಮನೆಯಲ್ಲಿ ಕುಳಿತುಕೊಳ್ಳಲು ಬಂದಿಲ್ಲ. ಯಾರ ಬೆದರಿಕೆಗೂ ಬಗ್ಗದೇ ಕೆಲಸ ಮಾಡುತ್ತಾರೆ. ನಿಮ್ಮ ಮಂಡ್ಯ ಸೊಸೆಯನ್ನು ನೀವು ಗೆಲ್ಲಿಸಬೇಕು. ಸಾಮಾನ್ಯ ಹೆಣ್ಣು ಮಕ್ಕಳು ಕನಸು ಕಾಣಬೇಕು ಅಂದರೆ ನೀವು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದು ಯಶ್ ಕೇಳಿಕೊಂಡರು.