– ಎಲ್ಲೇ ಹೋದ್ರೂ ಜಗತ್ತಿನಲ್ಲಿ ಮದ್ದೂರು ವಡೆ ಫೇಮಸ್
ಮಂಡ್ಯ: ದೊಡ್ಡರಸಿನಕೆರೆ ನನಗೆ ತುಂಬಾ ಆತ್ಮೀಯವಾದ ಮತ್ತು ಹತ್ತಿರವಾದ ಊರಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡುವ ವೇಳೆ ನಟ ಯಶ್ ಹೇಳಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಯಶ್, ನನಗೆ ತುಂಬಾ ಹತ್ತಿರವಾದ ಮತ್ತು ಆತ್ಮೀಯವಾದ ದೊಡ್ಡರಸಿನಕೆರೆ ಊರು ಇಲ್ಲಿದೆ. ದೊಡ್ಡರಸಿನಕೆರೆ ಮತ್ತು ಚಿಕ್ಕರಸಿನಕೆರೆ ಬಳಿ ಕಿರಾತಕ ಸಿನಿಮಾದ ಶೂಟಿಂಗ್ ಮಾಡಿದ್ದೇವೆ. ಈ ಕಾರಣಕ್ಕೆ ಈ ಊರು ಆತ್ಮೀಯವಾಗಿದೆ. ಎಲ್ಲೇ ಹೋದರೂ ಜಗತ್ತಿನಲ್ಲಿ ಮದ್ದೂರು ವಡೆ ಫೇಮಸ್ ಆಗಿದೆ. ಫೈವ್ ಸ್ಟಾರ್ ಹೋಟೆಲ್ಗಳಲ್ಲೂ ಮದ್ದೂರು ವಡೆ ಅಂತ ಬೋರ್ಡ್ ಹಾಕಿರುತ್ತಾರೆ. ನಮ್ಮತನ ಇದೆ, ಅದು ನಮ್ಮ ಊರು. ಹೀಗಾಗಿ ಅದನ್ನು ನೋಡಿದರೆ ನನಗೆ ಖಷಿಯಾಗುತ್ತದೆ ಎಂದು ಹೇಳಿದರು.
ಅದೇ ರೀತಿ ಅಂಬರೀಶಣ್ಣ ಮಂಡ್ಯದಿಂದ ಎಲ್ಲಿಗೆ ಹೋದರೂ ಇಂಡಿಯಾಗೆ ಫೇಮಸ್ಸಾಗಿದ್ದಾರೆ. ನಾವು ಯಾವಾಗಲೂ ನಮ್ಮದು, ನಮ್ಮತನವನ್ನು ಇಟ್ಟುಕೊಂಡು ಬದುಕುತ್ತೇವೋ ಆಗ ಇಡೀ ಜಗತ್ತೆ ನಮ್ಮನ್ನು ಗೌರವಿಸುತ್ತದೆ. ನಮ್ಮತನ ಬಿಟ್ಟು ಬರಿ ಪಿಜ್ಜಾ-ಬರ್ಗರ್ ತಿಂದುಕೊಂಡು ಇದ್ದರೆ ನಾಳೆ ನಾವು ಯಾರು ಏನು ಎಂದು ಜನರು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ ಎಂದರು.
ಇದು ರಾಜ್ಯದ ಚುನಾವಣೆಯಲ್ಲ, ಕೇಂದ್ರದ ಚುನಾವಣೆ. ಕೇಂದ್ರದ ಯೋಜನೆಗಳನ್ನು ಭ್ರಷ್ಟಾಚಾರವಿಲ್ಲದೆ ನಿಮಗೆ ತಲುಪಿಸುತ್ತಾರೆ. ಉದ್ದೇಶಪೂರ್ವಕವಾಗಿ ನಾಲ್ಕು ಜನ ಸುಮಲತಾ ಎಂಬ ಮಹಿಳೆಯರನ್ನ ಕಣಕ್ಕಿಳಿಸಿದ್ದಾರೆ. ಯಾರು ಗೊಂದಲಕ್ಕೆ ಒಳಗಾಗಗದೇ ಕ್ರಮಸಂಖ್ಯೆ 20ಕ್ಕೆ ಮತ ಹಾಕಿ ಎಂದರು. ಕ್ರಮಸಂಖ್ಯೆ 20 ಎಂದಾಗ ಕುಮಾರಸ್ವಾಮಿಗೆ ಆಪತ್ತು ಎಂದು ಅಭಿಮಾನಿಗಳು ಹೇಳಿದರು. ಅದಕ್ಕೆ ಹಾಗೆಲ್ಲಾ ಅನ್ನಬೇಡಿ ಎಂದು ಯಶ್ ಮನವಿ ಮಾಡಿದರು.