ನೆಲಮಂಗಲ: ಹೆದ್ದಾರಿಗಳಲ್ಲಿ ಹಾಗೂ ರೈಲುಗಳಲ್ಲಿ ಸಂಚರಿಸುವ ಮಂದಿಗೆ ಲಾಂಗು, ಮಚ್ಚು ತೋರಿಸಿ ದರೋಡೆ ಮಾಡುತ್ತಿದ್ದ ಐದು ಮಂದಿ ದರೋಡೆಕೋರರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬುಧವಾರ ತಡರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿ, ಕೀರ್ತಿರಾಜು, ಮನೋಜ್, ಅಶ್ರಫ್ ಅಲಿ ಹಾಗೂ ಕಾರ್ತಿಕ್ ಗೌಡ ಬಂಧಿತ ಆರೋಪಿಗಳು. ಈ ಐದು ಮಂದಿ ದರೋಡೆಕೋರರು ತಿಕ್ಲನ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದವರು ಎಂದು ಹೇಳಲಾಗಿದೆ.
ಬಂಧಿತ ದರೋಡೆಕೋರರ ಪೈಕಿ ತನ್ನ ಬೈಕಿನಲ್ಲಿ ‘ನನ್ ನೋಡಿ ಯಾರು ಉರ್ಕೋಬೇಡಿ, ತಾಕತ್ ಇದ್ರೆ ತಡಿರಿ’, ಹೀಗೆ ಬೈಕ್ ನಲ್ಲಿ ಹಾಕೊಂಡು ಜನರಿಗೆ ಹಾಗೂ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ. ಈ ಐದು ಮಂದಿ ಹೆದ್ದಾರಿ ಹಾಗೂ ರೈಲುಗಳಲ್ಲಿ ಲಾಂಗು ಮಚ್ಚು ತೋರಿಸಿ ದರೋಡೆ ಮಾಡುತ್ತಿದ್ದರು. ಸದ್ಯ ಗ್ಯಾಂಗ್ ಲೀಡರ್ ಅಭಿ ಅಲಿಯಾಸ್ ತಿಕ್ಲ ನಾಪತ್ತೆಯಾಗಿದ್ದಾನೆ.
ಈ ದರೋಡೆಕೋರರು ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತುಮಕೂರು ಹೆದ್ದಾರಿ ಕೆಂಗೇರಿ ರೈಲ್ವೆ ನಿಲ್ದಾಣಗಳಲ್ಲಿ ದರೋಡೆ ಮಾಡುತಿದ್ದರು. ಹಾಗಾಗಿ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಸಿಂಗಮ್ ಮಂಜುನಾಥ್ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 2 ಬೈಕ್, 4 ಮೊಬೈಲ್ ಹಾಗೂ ಮಾರಕಾಸ್ತ್ರಗಳು ವಶಕ್ಕೆ ಪಡೆದು ಹೆಚ್ವಿನ ವಿಚಾರಣೆ ನಡೆಸುತಿದ್ದಾರೆ.