ಹುಬ್ಬಳ್ಳಿ: ಪ್ರೀತಿಸುವಂತೆ ಯುವಕನೊಬ್ಬ ಅಪ್ರಾಪ್ತೆಯ ಬೆನ್ನು ಬಿದ್ದ ಪರಿಣಾಮ ಬಾಲಕಿಯ ತಂದೆಯಿಂದ ಧರ್ಮದೇಟು ತಿಂದಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಬಳಿ ನಡೆದಿದೆ.
ಅಮರಗೋಳದ ನಿವಾಸಿಯಾಗಿರೋ ಸುನಿಲ್ ಹನಕನಹಳ್ಳಿ ಎಂಬಾತ ಧರ್ಮದೇಟು ತಿಂದವನಾಗಿದ್ದು, ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಸುನೀಲ್ ಈ ಪ್ರದೇಶದ ಸುಮಾಳನ್ನು(ಹೆಸರು ಬದಲಾಯಿಸಿಲಾಗಿದೆ) ಪ್ರೀತಿಸುತ್ತೇನೆಂದು ಹಲವು ದಿನಗಳಿಂದ ಆಕೆಯ ಬೆನ್ನು ಬಿದ್ದಿದ್ದ.
ಸುನಿಲ್ ಪ್ರೀತಿಗೆ ಸುಮಾ ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ 17 ವರ್ಷದ ಅಪ್ರಾಪ್ತೆ ವಿದ್ಯಾನಗರದ ಮಹಿಳಾ ಕಾಲೇಜಿನಲ್ಲಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಸುನಿಲ್ ಆಕೆಯನ್ನು ಫಾಲೋ ಮಾಡಿದ್ದಾನೆ. ಇದೇ ವಿಷಯ ಸುಮಾಳ ತಂದೆ ಧರ್ಮಪ್ಪ ಅವರಿಗೆ ಗೊತ್ತಾಗುತ್ತಿದ್ದಂತೆ ಸ್ಥಳೀಯರ ಜೊತೆಗೂಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ತನ್ನ ಮಗಳ ಒಪ್ಪಿಗೆ ಇಲ್ಲದ ಒತ್ತಾಯದ ಮೇರೆಗೆ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಹಾಳು ಮಾಡುತ್ತಿದ್ದಾನೆಂದು ತಂದೆ ಧರ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಧರ್ಮದೇಟು ತಿಂದ ಸುನಿಲ್ ನನ್ನು ನವನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸುಮಾ ಅಲ್ಲದೇ ಈ ಹಿಂದೆ ಪ್ರೀತಿ-ಪ್ರೇಮ ಹೆಸರಿನಲ್ಲಿ ಅಪ್ರಾಪ್ತೆಯರನ್ನು ಪುಸಲಾಯಿಸಿ ಅವರ ಬದುಕಿನ ಜೊತೆ ಸುನಿಲ್ ಚೆಲ್ಲಾಟವಾಡುತ್ತಿದ್ದ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
https://www.youtube.com/watch?v=6beI6pS8zG4