ಕೊಪ್ಪಳ: ನಗರದಲ್ಲಿ ಕಳೆದ ಮೂರನಾಲ್ಕು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಹಲವು ಕಡೆ ಹಳ್ಳಕೊಳ್ಳಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸೋಮವಾರ ನಡೆದ ಒಂದು ಘಟನೆ ನೋಡುಗರನ್ನು ಮೈಜುಮ್ ಎನ್ನಿಸುತ್ತದೆ.
ಕೊಪ್ಪಳ ಜಿಲ್ಲೆಯ ಕೂಕುನೂರು ತಾಲೂಕಿನ ಸಿದ್ನೆಕೊಪ್ಪ ಮತ್ತು ಸೋಂಪುರು ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಸತತವಾಗಿ ಸುರಿದ ಮಳೆಗೆ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಮುಂಜಾನೆ ಶಾಲೆಗೆ ಹೋಗಿದ್ದ ಗ್ರಾಮದ ವಿದ್ಯಾರ್ಥಿಗಳು ವಾಪಸ್ ಬರುವಷ್ಟರಲ್ಲಿ ಹಳ್ಳ ತುಂಬಿ ರಸ್ತೆ ಮೇಲೆ ನೀರು ರಭಸವಾಗಿ ಹರಿಯೋಕೆ ಪ್ರಾರಂಭವಾಗಿದೆ.
ನೀರಿನ ಹರಿವು ರಭಸದಿಂದ ಇರುವ ಕಾರಣ ಬಸ್ ಡ್ರೈವರ್ ಬಸ್ ದಾಟಿಸುವ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಆದರೆ ಗ್ರಾಮದ ಜನರು ಮಾತ್ರ ರಭಸವಾಗಿ ಹರಿಯುತ್ತಿರುವ ನೀರಿನ ಮಧ್ಯೆಯೇ ವಿದ್ಯಾರ್ಥಿಗಳನ್ನು ಆ ಕಡೆ ದಂಡೆಯಿಂದ ಈ ಕಡೆಗೆ ಕರೆ ತಂದಿದ್ದಾರೆ. ಅದೃಷ್ಟವಶಾತ್ ದಾಟುವಾಗ ಯಾವುದೇ ಅವಘಡ ಸಂಭವಿಸಿಲ್ಲ.
ಒಂಚೂರು ಆಯ ತಪ್ಪಿದ್ರು ಅನಾಹುತ ಆಗುತ್ತಿತ್ತು. ಎಲ್ಲರೂ ಆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದರು. ಇದು ಸಿದ್ನೆಕೊಪ್ಪ ಮತ್ತು ಸೋಂಪುರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಪ್ರಮುಖ ರಸ್ತೆ ಆಗಿರುವುದರಿಂದ ವಿಧಿ ಇಲ್ಲದೆ ಇಲ್ಲಿನ ಗ್ರಾಮಸ್ಥರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಕಾಗಿದೆ.
ಇಲ್ಲಿ ಒಂದು ಸೇತುವೆ ನಿರ್ಮಿಸಲು ಸಾಕಷ್ಟು ಸಾರಿ ಗ್ರಾಮಸ್ಥರು ಮನವಿ ಸಲ್ಲಿಸಿದರು ಇದುವರೆಗೂ ಯಾರು ಕ್ಯಾರೆ ಎಂದಿಲ್ಲ. ಏನಾದರೂ ಅಪಘಾತ ಸಂಭವಿಸುವ ಮೊದಲೇ ನಮ್ಮೂರಿಗೆ ಒಂದು ಮೇಲ್ಸೆತುವೆ ನಿರ್ಮಿಸಿಕೊಡಿ ಎಂದು ಎರಡು ಗ್ರಾಮದ ಜನರ ಒತ್ತಾಸೆಯಾಗಿದೆ.