ಬೆಂಗಳೂರ: ಹೆದ್ದಾರಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಂಗಳಮುಖಿಯರು ರಸ್ತೆ ನಿಯಮ ಪಾಲಿಸುವಂತೆ ಕೈಮುಗಿದು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ ಘಟನೆ ನಗರದ ನೆಲಮಂಗಲ ಟೋಲ್ ಗೇಟ್ ಬಳಿ ನಡೆದಿದೆ.
ನಗರದ ಹೊರವಲಯದ ನೆಲಮಂಗಲದ ಟೋಲ್ ಗೇಟ್ ಬಳಿ ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದರು. ಅವರ ಈ ಕಾರ್ಯಕ್ಕೆ ಟೋಲ್ ಗೇಟ್ ಬಳಿ ನಿಂತಿದ್ದ ಮಂಗಳಮುಖಿಯರೂ ಸಾಥ್ ನೀಡಿದರು.
ರಾಷ್ಟ್ರೀಯ ಹೆದ್ದಾರಿ 48ರ ಲ್ಯಾಂಕೋ ಟೋಲ್ ಗೇಟ್ ನಲ್ಲಿ ಪೊಲೀಸರು ಆರಂಭಿಸಿದ್ದ ಈ ಅಭಿಯಾನದಲ್ಲಿ ಮಂಗಳಮುಖಿಯರು, ಅಲ್ಲಿಗೆ ಬರುತ್ತಿದ್ದ ಪ್ರತಿಯೊಂದು ಕಾರು ಚಾಲಕರಿಗೆ ಸೀಟ್ ಬೆಲ್ಟ್ ಹಾಗೂ ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಕೈ ಮುಗಿದು ಹೇಳಿದರು.
ತೃತೀಯ ಲಿಂಗಿಗಳ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು, ವಾಹನ ಸವಾರರು ಹಾಗೂ ಪೊಲೀಸ್ ಅಧಿಕಾರಿಗಳೂ ಸಹ ಅಭಿನಂದನೆ ಸಲ್ಲಿಸಿದರು.